ವೈದ್ಯರಲ್ಲಿ ಮಾನವೀಯ ವೌಲ್ಯಗಳು ಅತಿ ಅಗತ್ಯ: ಡಾ.ತನುಜಾ
ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಪದವಿ ಪ್ರದಾನ ಸಮಾರಂಭ
ಉಡುಪಿ, ಎ.26: ಆಯುರ್ವೇದ ವೈದ್ಯರಲ್ಲಿ ಮಾನವೀಯ ವೌಲ್ಯಗಳು ಅತ್ಯಂತ ಅಗತ್ಯ. ಇದರಿಂದ ತಮ್ಮ ಬಳಿ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಹೊಸದಿಲ್ಲಿಯ ಆಲ್ ಇಂಡಿಯಾ ಇಸ್ಟಿ ಟ್ಯೂಟ್ ಆಫ್ ಆಯುರ್ವೇದ ಇದರ ನಿರ್ದೇಶಕಿ ಡಾ.ತನುಜಾ ನೇಸರಿ ಹೇಳಿದ್ದಾರೆ.
ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣ ದಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವೈದ್ಯರು ತಮ್ಮ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಉತ್ಸಾಹ ತೋರಬೇಕು. ಇದುವೇ ಯಶಸ್ವಿ ಬದುಕಿನ ರಹಸ್ಯವಾಗಿದೆ. ಸಂವಹನ ಕೌಶಲ್ಯ, ಧೈರ್ಯ, ಎಚ್ಚರಿಕೆ, ಸಹಾನುಭೂತಿಗಳಿಂದ ಇತರರಿಗೆ ವಿಭಿನ್ನವಾಗಿರಲು ಸಾಧ್ಯವಾಗುತ್ತದೆ. ನಿರ್ಣಯ ಮತ್ತು ಬದ್ಧತೆ ಅತ್ಯಂತ ಮುಖ್ಯ. ಆಯುರ್ವೇದದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್ಡಿಎಂ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಪ್ರೊ.ಬಿ.ಯಶೋವರ್ಮ ಪದವಿ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
67 ಪದವಿ ಹಾಗೂ 23 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ವಿದ್ಯಾರ್ಥಿನಿ ಜೀನಾ ಜಾರ್ಜ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಸ್ವಾಗತಿಸಿದರು. ಕಾಲೇಜು ಸ್ಟೂಡೆಂಟ್ ಅಫೈರ್ಸ್ನ ಡೀನ್ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಎಸ್ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ವಂದಿಸಿದರು. ಪಿ.ಜಿ. ಸ್ಟಡೀಸ್ನ ಡೀನ್ ಡಾ.ಬಿ.ಆರ್.ದೊಡ್ಡಮನಿ ಉಪಸ್ಥಿತರಿದ್ದರು. ಡಾ.ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.