ಕಾಂಗ್ರೆಸ್ನಿಂದ ಜೆಪ್ಪು ಮಹಾಕಾಳಿಪಡ್ಪು ಶಾಲೆಯಲ್ಲಿ ಪುಸ್ತಕ ವಿತರಣೆ
ಮಂಗಳೂರು, ಜೂ.25: ಜೆಪ್ಪುಮಹಾಕಾಳಿಪಡ್ಪುವಿನಲ್ಲಿರುವ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅತ್ತಾವರ ವಾರ್ಡ್ ಕಾಂಗ್ರೆಸ್ ಸಮಿತಿಯಿಂದ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಕೆ. ಸುಧೀರ್, ತೀರಾ ಬಡವರ ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದರೊಂದಿಗೆ ಮಕ್ಕಳಿಗೆ ಮಾತ್ರವಲ್ಲದೇ ಅವರ ಹೆತ್ತವರಿಗೂ ಬಹಳಷ್ಟು ಸಹಕಾರಿಯಾಗಲಿದೆ ಎಂದರು.
ರಾಜ್ಯ ಪರಿಶಿಷ್ಟ ಪಂಗಡಗಳ ಸಂಚಾಲಕ ಟಿ.ಹೊನ್ನಯ್ಯ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಳನ್ನು ಹೆಚ್ಚಿಸಲು ಶಾಲೆಯ ಅಧ್ಯಾಪಕರು ಪ್ರಯತ್ನಿಸಬೇಕು. ಅದಕ್ಕೆ ನಾವು ಸಹಕರಿಸಲು ಸದಾ ಸಿದ್ಧರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ-ತಿಂಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸೌತ್ ಬ್ಲಾಕ್ ಉಪಾಧ್ಯಕ್ಷ ಸದಾಶಿವ ಅಮೀನ್, ಕಾರ್ಯದರ್ಶಿ ಮುಹಮ್ಮದ್ ನವಾಝ್, ಮಾಜಿ ಕಾರ್ಪೊರೇಟರ್ ದಿನೇಶ್ ಪಿ.ಎಸ್., ದಕ್ಷಿಣ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೀರ್ತಿರಾಜ್, ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ತೌಫೀಖ್, ಪ್ರಮುಖರಾದ ಬಾಬು ಸುವರ್ಣ, ಅಶೋಕ ಕುಡುಪಾಡಿ, ಪ್ರವೀಣ್ ಬಪ್ಪಾಲ್, ಸಲೀಂ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಗೀತಾ ಅತ್ತಾವರ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತ್ತಾವರ ವಾರ್ಡ್ ಕಾರ್ಪೊರೇಟರ್ ಶೈಲಜಾ ವಹಿಸಿದ್ದರು