ಕಂದಕ್: ಶಿವರಾತ್ರಿ ಶೋಭಾಯಾತ್ರೆಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿ ತಂಪುಪಾನೀಯ ವಿತರಿಸಿದ ಮುಸ್ಲಿಮರು
ಮಂಗಳೂರು, ಮಾ.4: ಮಹಾಶಿವರಾತ್ರಿಯಂದು ಹಿಂದೂಗಳಿಗೆ ಸಿಹಿ-ತಂಪು ಪಾನೀಯ ವಿತರಿಸಿ ಕಂದಕ್ನ ಮುಸ್ಲಿಮರು ಸೌಹಾರ್ದ ಮೆರೆದಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ನಗರದ ನಿತ್ಯಾನಂದ ಆಶ್ರಮದತ್ತ ಶೋಭಾಯಾತ್ರೆ ನಡೆಸುತ್ತಿದ್ದ ಹಿಂದೂಗಳಿಗೆ ಕಂದಕ್ ಪ್ರದೇಶದ ಮುಸ್ಲಿಂ ಜಮಾಅತ್ನಿಂದ ಕಂದಕ್ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿದ್ದು, ಸಿಹಿ ತಿನಿಸು-ತಂಪುಪಾನೀಯ ವಿತರಿಸಿ ಸೌಹಾರ್ದ ಮೆರೆದಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಹಾಗೂ ಹನುಮಂತ ಕಾಮತ್ ಮಾತನಾಡಿ, ‘ಕಂದಕ್ ಪ್ರದೇಶವು ಸೌಹಾರ್ದದಿಂದ ಕೂಡಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರ ನಡುವೆ ಉತ್ತಮ ಬಾಂಧವ್ಯವಿದೆ. ಎಲ್ಲ ಸಮುದಾಯಗಳ ಜನತೆಯೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಈ ವಠಾರದಂತೆ ಪ್ರತಿಯೊಂದು ಗಲ್ಲಿ, ವಠಾರದಲ್ಲೂ ಸೌಹಾರ್ದ ಹೆಚ್ಚಬೇಕು. ಭಾರತೀಯರಾದ ನಾವೆಲ್ಲರೂ ದೇಶದ ಗೌರವವನ್ನು ಹೆಚ್ಚಿಸಬೇಕು’ ಎಂದು ಹೇಳಿದರು.
ಈ ಸಂದರ್ಭ ನಿತ್ಯಾನಂದ ಸೇವಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ, ರೋಹಿತ್, ಅನಿಲ್, ಜನಾರ್ದನ್, ಪ್ರಭಾಕರ, ಪ್ರಮೋದ್, ಸಂತೋಷ್ ಅವರೊಂದಿಗೆ ಕಂದಕ್ ಜಮಾಅತ್ನ ಸದಸ್ಯರಾದ ಸಿದ್ದೀಕ್, ಅಶ್ರಫ್, ಫಯಾಝ್, ರಿಯಾಝ್, ಆರಿಫ್, ಅರ್ಶದ್, ರಫೀಕ್, ಮುನೀರ್, ಹಕೀಂ, ಸಿ.ಹಮೀದ್, ಸಲಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.