ಕ್ಯಾನ್ಸರ್ ರೋಗಿಯ ಚಿಕಿತ್ಸೆಗೆ ಸರಕಾರದ ನೆರವು ಕಲ್ಪಿಸಲು ಮನವಿ
ಉಡುಪಿ, ಎ.20: 20 ವರ್ಷಗಳಿಂದ ಉಡುಪಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಮನೋಹರ್ ಪೂಜಾರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ತೀರಾ ಬಡವರಾಗಿರುವ ಇವರ ಚಿಕಿತ್ಸೆಗೆ ಸರಕಾರ ನೆರವು ನೀಡುವಂತೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮನೋಹರ್ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ಬಾಯಲ್ಲಿದ್ದ ಕ್ಯಾನ್ಸರ್ ಹುಣ್ಣು ಪತ್ತೆ ಹಚ್ಚಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ನೀಡುವಂತೆ ಸೂಚಿಸಿದರು. ಆದರೆ ಬಿಪಿಎಲ್ ಕಾರ್ಡ್ ಇಲ್ಲದ ಇವರು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
ಇವರು ಸರಕಾರದ ಉಚಿತ ಚಿಕಿತ್ಸಾ ಯೋಜನೆಗಾಗಿ ಅಧಿಕಾರಿಗಳ ಬಳಿ ಸಾಕಷ್ಟು ಅಲೆದಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇವರಿಗೆ ಇನ್ನು ಕೂಡ ಬಿಪಿಎಲ್ ಕಾರ್ಡ್ ದೊರೆತಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮನೋಹರ್ ಪೂಜಾರಿಗೆ ಸರಕಾರದ ಯೋಜನೆಯ ಮೂಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಉದ್ಯಾವರ, ಅಶೋಕ್ ಪೂಜಾರಿ, ಕೇಶವ ಕಾಮತ್, ಮನೋಹರ್ ಪೂಜಾರಿ ಉಪಸ್ಥಿತರಿದ್ದರು.