ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆಯ ಸಂದೇಶ: ಯುವಕನಿಂದ ಪೊಲೀಸ್ ದೂರು
ಬಂಟ್ವಾಳ, ಜು.3: ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆಯ ಸಂದೇಶವನ್ನು ಹರಿಯಬಿಡಲಾಗಿದೆ ಎಂದು ಆರೋಪಿಸಿ ಯುವಕನೋರ್ವ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಇಲ್ಲಿನ ನಿವಾಸಿ ಪೀಸ್ ಫಯ್ಯಾ ಎಂಬವರು ಈ ದೂರು ನೀಡಿದ್ದು, ತನ್ನ ಫೇಸ್ಬುಕ್ ಪೇಜ್ನಿಂದ ಪೊಟೋವನ್ನು ಬಳಸಿ "ದಕ್ಷಿಣ ಕನ್ನಡದಲ್ಲೊಬ್ಬ ಜಿಹಾದಿ ಕಾಮುಕ" ಎಂಬ ತಲೆಬರಹದ ಅಡಿಯಲ್ಲಿ ಯಾರೋ ಕಿಡಿಗೇಡಿಗಳು ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಅದಲ್ಲದೆ, ‘’ಮಡಂತ್ಯಾರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಪೀಸ್ ಫಯ್ಯಾ ಎಂಬ ಜಿಹಾದಿ ಯುವಕ ಸುಂದರ ಹಿಂದೂ ಯುವತಿಯರನ್ನು ಗೆಳೆತನ ಮಾಡಿಕೊಂಡು ಉಚಿತವಾಗಿ ಬಟ್ಟೆಗಳನ್ನು ಕೊಡುತ್ತಿದ್ದಾನೆ. ಬಳಿಕ ಯುವತಿಯರನ್ನು ಪುಸಲಾಯಿಸಿ ತಮ್ಮ ಜಿಹಾದ್ ಬಲೆಗೆ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾನೆ. ಈ ಕಾಮುಕನಿಗೆ ತಕ್ಕ ಪಾಠ ಕಲಿಸಬೇಕು" ಎನ್ನುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುತ್ತಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದೇಶವನ್ನು ಸೃಷ್ಟಿಸಿದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.