ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಿಂದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ
ಮಂಗಳೂರು, ನ.24: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯ ಸಂರಕ್ಷಣೆಯ ಬಗ್ಗೆ ಎಂದೂ ಅಲಕ್ಷರಾಗದಿರಿ. ಒಮ್ಮೆ ಆರೋಗ್ಯ ಕೆಟ್ಟುಹೋಯಿತೆಂದರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ. ಎಲ್ಲ ರೀತಿಯ ಕೆಟ್ಟ ಚಟಗಳಿಂದ ದೂರವಿದ್ದು, ಶಿಸ್ತುಬದ್ಧ ಜೀವನದ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಕಮಿಷನರ್ ಟಿ. ಕೋದಂಡರಾಮ ಹೇಳಿದ್ದಾರೆ.
ರಾಷ್ಟ್ರೀಯ ಪಾರ್ಮಸಿ ಸಪ್ತಾಹದ ಅಂಗವಾಗಿ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ತೊಕ್ಕೊಟ್ಟಿನಲ್ಲಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಜಾಥಾಕ್ಕೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಡಾ.ಮುಹಮ್ಮದ್ ಮುಬೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಆಸ್ಪತ್ರೆಗಳಿಗೆ ಬೇಟಿ ನೀಡಿ ರೋಗದಿಂದ ನರಳುವ ರೋಗಿಗಳನ್ನು ಕಂಡಾಗ ಆರೋಗ್ಯದ ಮಹತ್ವ ತಿಳಿಯುತ್ತದೆ ಎಂದರು.
ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು. ಪಿ.ಎ. ಶಿಕ್ಷಣ ಸಂಸ್ಥೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಶರ್ಪುದ್ದೀನ್ ಉಪಸ್ಥಿತರಿದ್ದರು.
ಪಿ.ಎ. ಪಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆರೋಗ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಿದರು.