ಮಾನವೀಯತೆ ಹಾಗೂ ಅಂತ:ಕರಣ ಇದ್ದಲ್ಲಿ ಸಾಮರಸ್ಯ, ನೆಮ್ಮದಿ ಸಾಧ್ಯ:ಭವಾನಿ ಚಿದಾನಂದ
ಪುತ್ತೂರು, ಮೇ 14: ಮಾನವೀಯತೆ ಹಾಗೂ ಅಂತ:ಕರಣ ಇದ್ದಲ್ಲಿ ಸಾಮರಸ್ಯ, ಶಾಂತಿ, ನೆಮ್ಮದಿ ನೆಲೆಯಾಗಲು ಸಾಧ್ಯ. ರಕ್ತದಾನ ಮಾಡುವುದು ಮನುಷ್ಯರ ನಡುವಿನ ಬಾಂಧವ್ಯದ ಪ್ರತೀಕ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಸಲುವಾಗಿ ಪ್ರತಿಯೊಬ್ಬರೂ ಮುಂದೆ ಬರಬೇಕು ಎಂದು ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ದ.ಕ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ನೌಕರರು ಮತ್ತು ಸಿಬಂದಿ ವರ್ಗದ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ರಕ್ತದಾನ ಮಾಡುವುದರಿಂದ ನೂರಾರು ಅಸಹಾಯಕರಿಗೆ ನೆರವಾಗಲು ಸಾಧ್ಯವಿದೆ. ಪ್ರತಿಯೊಂದನ್ನೂ ಹಣದಿಂದ ಅಳೆಯುವ ಈ ಸಂದರ್ಭದಲ್ಲಿ ರಕ್ತವನ್ನು ಈ ರೀತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇಂತಹ ಪವಿತ್ರ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದರು.
ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮಾತನಾಡಿ, ಪಂಚಾಯತ್ರಾಜ್ ನೌಕರರ ವತಿಯಿಂದ 3 ನೆ ವರ್ಷದ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಸಮಾಜದ ಆಗು ಹೋಗುಗಳ ಅರಿವು ಹೊಂದಿರುವವರು ಇಂತಹ ಸಮಾಜಮುಖಿ ಕಾರ್ಯಕ್ರಮ ಕೈಗೊಂಡಾಗ ಜಾಗೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮೇಲ್ವಿಚಾರಕ ಡಾ.ಎಡ್ವರ್ಡ್ ರಕ್ತದಾನದ ಕುರಿತು ಮಾಹಿತಿ ನೀಡಿದರು. 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರುವ ಆರೋಗ್ಯವಂತ ಪ್ರತಿ ವ್ಯಕ್ತಿಯೂ ರಕ್ತದಾನ ಮಾಡಬಹುದು ಎಂದು ಹೇಳಿದರು.
ತಾ.ಪಂ. ಸಹಾಯಕ ನಿರ್ದೇಶಕ ಸುಧಾಕರ್, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೌಕರರ ಸಂಘದ ಅಧ್ಯಕ್ಷ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ರಾಮಕುಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಚಂದ್ರ ವಂದಿಸಿದರು.
ಪುತ್ತೂರು ಸರಕಾರಿ ಆಸ್ಪತ್ರೆ ಹಾಗೂ ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರ ನಡೆಯಿತು. ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ನೌಕರರು ಶಿಬಿರದಲ್ಲಿ ರಕ್ತದಾನ ಮಾಡಿದರು.