ಉಡುಪಿ: ಗ್ರಾಪಂ ವ್ಯಾಪ್ತಿಯಲ್ಲಿ ನೀರು ಸರಬರಾಜು ಗೇಟ್ವಾಲ್ವ್ ಬಂದ್
ಉಡುಪಿ, ಮಾ.21: ನಗರಸಭಾ ವ್ಯಾಪ್ತಿಯಲ್ಲಿ ಬಿರುಬೇಸಿಗೆ ಕಾರಣ ನೀರಿನ ಅಭಾವ ತಲೆದೂರುತ್ತಿದ್ದು, ಈ ಅಭಾವವನ್ನು ಪರಿಗಣಿಸಿ ಬಜೆಯಿಂದ ಉಡುಪಿಗೆ ನೀರು ಸರಬರಾಜು ಹಾದು ಹೋಗಲು ಮುಖ್ಯ ಕೊಳವೆ ಮಾರ್ಗದಲ್ಲಿ ಬರುವ ಗ್ರಾಪಂಗಳಿಗೆ ಈಗ ದಿನದ 24 ಗಂಟೆಯೂ ನೀರು ಉಪಯೋಗಿಸುತ್ತಿದ್ದು, ಈ ನೀರು ಸರಬರಾಜನ್ನು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವಂತೆ ದಿನದ 6 ಗಂಟೆಗೆ ಮಿತಿಗೊಳಿಸಲಾಗಿದೆ.
ಈ ಮಾರ್ಗದಲ್ಲಿ ಬಜೆ ಡ್ಯಾಂನಿಂದ ಮಣಿಪಾಲ ಜಿಎಸ್ಎಲ್ಆರ್ವರೆಗೆ ಬರುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 7ರಿಂದ ಅಪರಾಹ್ನ ಒಂದು ಗಂಟೆಯವರೆಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ನೀರಿನ ವೇಗ ಹಾಗೂ ಜಿಎಸ್ಎಲ್ಆರ್ ಮಟ್ಟ ಹೆಚ್ಚಿಸಲು ನೀರು ಸರಬರಾಜು ಗೇಟ್ವಾಲ್ವ್ಗಳನ್ನು ನಗರಸಭಾ ವತಿಯಿಂದ ಗ್ರಾಪಂ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಕಳೆದ ವಾರ ಉಡುಪಿ ಶಾಸಕ ರಘುಪತಿ ಭಟ್ ಹಾಗೂ ನಗರಸಭಾ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಪೌರಾಯುಕ್ತರು ತಿಳಿಸಿದ್ದಾರೆ.