ಕಾಸರಗೋಡು : ಯುವಕರ ತಂಡಗಳು ಪರಸ್ಪರ ಹೊಡೆದಾಟ
ಕಾಸರಗೋಡು, ಮೇ 28: ಕುಂಬಳೆ ಸಮೀಪದ ಮೊಗ್ರಾಲ್ ಪೇಟೆ ಯಲ್ಲಿ ಯುವಕರ ತಂಡಗಳು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು , ಸಿಪಿಎಂ , ಮುಸ್ಲಿಂ ಲೀಗ್ ಪಕ್ಷದ ಕಚೇರಿ , ವ್ಯಾಪಾರ ಮಳಿಗೆ ಮೊದಲಾದವುಗಳನ್ನು ಹಾನಿಗೊಳಿಸಿದೆ. ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು , ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಕ್ಷದ ಕಛೇರಿಯನ್ನು ಹಾನಿಗೊಳಿಸಿದ್ದನ್ನು ಖಂಡಿಸಿ ಸಿಪಿಎಂ ಪ್ರಾದೇಶಿಕ ಸಮಿತಿ ಶನಿವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಮೊಗ್ರಾಲ್ ಪೇಟೆಯಲ್ಲಿ ಹರತಾಳಕ್ಕೆ ಕರೆ ನೀಡಿದೆ. ಹರತಾಳದಿಂದ ವಾಹನಗಳನ್ನು ಹೊರತುಪಡಿಸಲಾಗಿದೆ.
ಗಾಯಗೊಂಡ ಮುಹಮ್ಮದ್ ನಿಶಾದ್ (21), ಫಾರೂಕ್ ( 38), ಅಬ್ದುಲ್ ಸಫೀರ್ ( 25), ಅಮೀರ್ ( 35) ಇಮ್ತಿಯಾಝ್ (24), ಮೊಯ್ದಿನ್ ( 26) , ಮುಹಮ್ಮದ್ ಮುಂಡಕೆ ( 45), ನೌಫಲ್ ಡಿ . ಎಂ ( 36) ರವರನ್ನು ಕಾಸರಗೋಡಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾಪಾರಿಗಳ ಮೇಲೆ ಹಲ್ಲೆ ಮತ್ತು ಅಂಗಡಿಗಳಿಗೆ ಹಾನಿಗೊಳಿಸಿದ್ದನ್ನು ಪ್ರತಿಭಟಿಸಿ ವರ್ತಕರು ಅಂಗಡಿ ಮುಚ್ಚಿ ಹರತಾಳ ನಡೆಸಲು ತೀರ್ಮಾನಿಸಿದ್ದಾರೆ .
ಕೆಲ ದಿನಗಳ ಹಿಂದೆ ಯುವಕರ ತಂಡಗಳ ನಡುವೆ ಘರ್ಷಣೆ ನಡೆದಿತ್ತು. ಇದರ ಪುನಾರಾವರ್ತನೆ ಎಂಬಂತೆ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ . ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಿತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.