ಬಂಟ್ವಾಳ ಜಮೀಯ್ಯತುಲ್ ಫಲಾಹ್ ಮಹಾಸಭೆ
ವಿಟ್ಲ, ಮೇ 28: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವಾರ್ಷಿಕ ಮಹಾಸಭೆಯು ಮೆಲ್ಕಾರ್ ಎಂ.ಎಚ್. ಕಂಪೌಂಡ್ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಘಟಕಾಧ್ಯಕ್ಷ ಬಿ.ಎಂ. ತುಂಬೆ ಮಾತನಾಡಿ ಸಂಘದ ಬೆಳವಣಿಗೆಗೆ ಸಮಾಜ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಸಂಘವನ್ನು ವಿಸ್ತರಿಸುವ, ಬೆಳೆಸುವ ಕಾರ್ಯದಲ್ಲಿ ಸದಸ್ಯರು ಕೈಜೋಡಿಸಬೇಕು ಎಂದರು.
ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ಶೇಖ್ ಝೈನುದ್ದೀನ್, ಮಂಗಳೂರು ಘಟಕದ ಕಾರ್ಯದರ್ಶಿ ಕೆ.ಎಂ.ಕೆ. ಮಂಜನಾಡಿ ಭಾಗವಹಿಸಿದ್ದರು.
ಬಂಟ್ವಾಳ ಘಟಕದ ಕಾರ್ಯದರ್ಶಿ ಹಾಜಿ ಎಂ.ಎಚ್. ಇಕ್ಬಾಲ್ ವರದಿ ವಾಚಿಸಿದರು. ಕೋಶಾಧಿಕಾರಿ ಕೆ.ಕೆ. ಶಾಹುಲ್ ಹಮೀದ್ ಲೆಕ್ಕಪತ್ರ ಮಂಡಿಸಿದರು. ಸಂಘದ ಹಿಂದಿನ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹಾಲಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಮುಂದಿನ ಸಾಲಿಗೂ ಮುಂದುವರಿಸುವುದಾಗಿ ನಿರ್ಣಯಿಸಲಾಯಿತು. ಉಪಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.