ಗುರುಪುರ : ಪರಂಬೋಕು ತೋಡುಗಳ ಹೂಳೆತ್ತಲು ಮನವಿ
ಗುರುಪುರ, ಜೂ.13 : ಮೂಳೂರು ಗ್ರಾಮದ ಬೆಜ್ಜಿಬೆಟ್ಟು ಎಂಬಲ್ಲಿ ಹರಿಯುವ ಪರಂಬೋಕು ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ತೋಡಿನ ನೀರು ವಸತಿ ಪ್ರದೇಶ ಹಾಗೂ ಭತ್ತದ ಗದ್ದೆ ಪ್ರದೇಶಗಳಿಗೆ ಉಕ್ಕೇರಿ ಹರಿಯುವ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ತೋಡಿನ ಅಂಚಿನಲ್ಲಿ ನಡೆದಾಡುವ ಪಾದಚಾರಿಗಳಿಗೆ ಅಪಾಯ ಕಾದಿದೆ. ವರ್ಷಗಳ ಹಿಂದೆ ಈ ತೋಡು ಸುಮಾರು 15 ಅಡಿ ಆಳವಾಗಿತ್ತು. ಈಗ ಹೂಳು, ಪೊದೆ-ಗಿಡಗಂಟಿಗಳಿಂದ ತುಂಬಿ ಹೋಗಿದೆ. ಕಳೆದ ವರ್ಷ ತೋಡಿನ ಕೆಲವು ಕಡೆ ಜರಿದು, ಗದ್ದೆ ಪ್ರದೇಶಕ್ಕೆ ನೀರು ಹರಿದು ಕೃಷಿ ನಷ್ಟವಾಗಿತ್ತು. ಗ್ರಾಪಂನ ಗಮನ ಸೆಳೆದರೂ ಮತ್ತೊಂದು ಮಳೆಗಾಲದವರೆಗೆ ಯಾರೂ ತೋಡಿನ ಹೂಳೆತ್ತಲು ಮುಂದಾಗಲಿಲ್ಲ. ಹಾಗಾಗಿ ಈ ವರ್ಷವೂ ತೋಡು ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ಕೃಷಿಕ ಸತೀಶ್ ಕಾವ ಹೇಳಿದ್ದಾರೆ.
ಕೂಡಲೇ ಈ ಸರಕಾರಿ (ಪರಂಬೋಕು) ತೋಡಿನ ಸಹಿತ ಗುರುಪುರದ ಬಡಕರೆಯಲ್ಲಿರುವ ಮತ್ತೊಂದು ತೋಡಿನ ಹೂಳೆತ್ತಿ, ನದಿಭಾಗಕ್ಕೆ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.