ಎನ್ಐಒಎಸ್ ಪಠ್ಯ ಅಳವಡಿಕೆ: ರಾಜ್ಯದ ಮದ್ರಸಗಳಲ್ಲಿ ಆಧುನಿಕ ಶಿಕ್ಷಣ ನೀಡುವ ಯೋಜನೆಗೆ ಸಿದ್ಧತೆ
ಕೇಂದ್ರ ಸರಕಾರ ಘೋಷಿಸಿದ್ದ ಯೋಜನೆ
ಮಂಗಳೂರು, ಸೆ.13: ಕೇಂದ್ರ ಸರಕಾರ ಈ ಹಿಂದೆ ಘೋಷಿಸಿದ್ದ ‘ಮದ್ರಸಗಳಲ್ಲಿ ಆಧುನಿಕ ಶಿಕ್ಷಣ ನೀಡುವ ಯೋಜನೆ’ಗೆ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳು ಇದೀಗ ಸಿದ್ಧತೆ ಆರಂಭಿಸಿದ್ದಾರೆ.
ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಮದ್ರಸಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಧುನಿಕ ಶಿಕ್ಷಣ ನೀಡುವ ಯೋಜನೆ ಇದಾಗಿದೆ. ಕೇಂದ್ರ ಸರಕಾರದ ಈ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಂಡರೆ ದೇಶದಲ್ಲೇ ಕರ್ನಾಟಕವು ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಕೀರ್ತಿಗೆ ಪಾತ್ರವಾಗಲಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹೀಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಮುಸ್ಲಿಮ್ ಉಲಮಾಗಳ ಪ್ರಥಮ ಸುತ್ತಿನ ಸಭೆ ನಡೆದಿದೆ. ಇದರ ಅಗತ್ಯತೆಯ ಬಗ್ಗೆ ಉಲಮಾ ಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಸ್ಕೀಂ ಫಾರ್ ಕ್ವಾಲಿಟಿ ಎಜುಕೇಶನ್ ಇನ್ ಮದ್ರಸಾಸ್ (ಎಸ್ಕ್ಯೂಇಎಂ) ಹೆಸರಿನ ಈ ಯೊಜನೆಯ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚರ್ಚೆ ನಡೆಸಿ ಸಮುದಾಯದ ಮುಂದಿಡಲು ಸಿದ್ಧತೆ ಮಾಡಲಾಗುತ್ತಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು 11ನೇ ಹಣಕಾಸು ಯೋಜನೆಯಡಿ ಘೋಷಿಸಿದ್ದ ಈ ಯೋಜನೆಯು ಈಗ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾವಣೆ ಗೊಂಡಿದೆ. ಮದ್ರಸಗಳಲ್ಲಿ ಔಪಚಾರಿಕ ಶಿಕ್ಷಣ ನೀಡಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಮದ್ರಸ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣ ನೀಡಲು ಮುಂದೆ ಬಂದರೆ ಅವರಿಗೆ ಬೇಕಾದ ಹಣಕಾಸಿನ ನೆರವು ಸರಕಾರ ನೀಡಲಿದೆ ಎಂದು ಯೋಜನೆಯ ರಾಜ್ಯ ನೋಡೆಲ್ ಅಧಿಕಾರಿ ಅಥಾವುರ್ರಹ್ಮಾನ್ ತಿಳಿಸಿದ್ದಾರೆ.
►ಎನ್ಐಒಎಸ್ ಪಠ್ಯ: ಔಪಚಾರಿಕ ಶಿಕ್ಷಣ ಕೊಡಲು ಬೇಕಾದ ಉತ್ತಮ ಕಟ್ಟಡ, ತರಗತಿ ಕೋಣೆಗಳು, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಸಯನ್ಸ್ ಕಿಟ್, ಬುಕ್ ಬ್ಯಾಂಕ್ ಇತ್ಯಾದಿಗೆ ಅನುದಾನದ ಲಭ್ಯತೆ ಮತ್ತು ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ಸುಮಾರು 25 ಲಕ್ಷ ರೂ. ತನಕ ಒದಗಿಸಲು ಅವಕಾಶವಿದೆ. ಪದವೀಧರ ಶಿಕ್ಷಕರ ನೇಮಕ ಮಾಡಿದರೆ ಅವರಿಗೆ ವೇತನವನ್ನು ಕೂಡಾ ಸರಕಾರ ಪಾವತಿಸಲಿದೆ. ಸಂಸ್ಥೆಗಳು ಬಯಸಿದರೆ ಯುಕೆಜಿಯಿಂದ ಪ್ಲಸ್ ಟು ತನಕ ನ್ಯಾಶನಲ್ ಇನ್ಸ್ಟಿಟ್ಯೂಟ್ ಆ್ ಓಪನ್ ಸ್ಕೂಲಿಂಗ್(ಎನ್ಐಒಎಸ್) ಜತೆ ಸಂಯೋಜನೆ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಎನ್ಐಒಎಸ್ ಪಠ್ಯದಂತೆ ಪಾಠ ಪ್ರವಚನ ನಡೆಸಿ 10 ಮತ್ತು 12ನೇ ತರಗತಿಯ ಪ್ರಮಾಣಪತ್ರ ಪತ್ರ ನೀಡಲಾಗುವುದು. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಪದವಿ ಅಥವಾ ವೃತ್ತಿ ಶಿಕ್ಷಣ ಪಡೆಯಬಹುದಾಗಿದೆ. ಸದ್ಯ ಬೀದರ್, ಮಂಗಳೂರಿನ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್ಇ ಪಠ್ಯದ ಜತೆ ಕುರ್ಆನ್ ಕಂಠಪಾಠ ಮಾಡುವ ಹಿಫ್ಝ್ ಕೋರ್ಸ್ ನಡೆಸಲಾಗುತ್ತಿದೆ. ಅಲ್ಲದೆ ಮಂಗಳೂರಿನ ಕೆಲವು ಕಡೆ ಎನ್ಐಒಎಸ್ ಪಠ್ಯ ಕ್ರಮವಿದೆ.