ಬ್ಲಡ್ ಬ್ಯಾಂಕ್, ಐಎಸ್ಎಫ್ ಕುವೈತ್ ವತಿಯಿಂದ ರಕ್ತದಾನ ಶಿಬಿರ
ಕುವೈತ್: ಬ್ಲಡ್ ಬ್ಯಾಂಕ್ ಕುವೈತ್ ಮತ್ತು ಇಂಡಿಯನ್ ಸೋಶಿಯಲ್ ಪೋರಮ್ ಕುವೈತ್ ಜಂಟಿ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಇಲ್ಲಿನ ಅದಾನ್ ಬ್ಲಡ್ ಬ್ಯಾಂಕ್'ನಲ್ಲಿ ಶುಕ್ರವಾರ ಜರುಗಿತು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಪೋರಮ್ ಕುವೈತ್, ಕರ್ನಾಟಕ ಘಟಕದ ಅಧ್ಯಕ್ಷ ಮುಸ್ತಕೀಮ್ ಶಿರೂರ್ ಸಾರ್ವಜನಿಕ ರಕ್ತದಾನವು ಈ ಸಮಯದ ಅವಶ್ಯಕತೆಯಾಗಿದ್ದು, ಕುವೈತ್ ರಕ್ತನಿಧಿಗಳಲ್ಲಿ ರಕ್ತದ ಅಭಾವವಿದ್ದು ಭಾರತೀಯ ಅನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಅನಿವಾಸಿಗಳು ಪಾಲ್ಗೊಂಡರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅದಾನ್ ಬ್ಲಡ್ ಬ್ಯಾಂಕ್ ವೈದ್ಯೆ ಡಾ. ರಾನಿಯಾ ಇಬ್ರಾಹಿಂ, ಇಂಡಿಯನ್ ಸೋಶಿಯಲ್ ಪೋರಮ್ ಪದಾಧಿಕಾರಿಗಳು ಮತ್ತು ಸ್ವಯಂಸೇವಕರ ಶಿಸ್ತು ಮತ್ತು ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಪಕರಾದ ಅಬ್ದುಲ್ ರಝಾಕ್ ಮಾತನಾಡಿ ಐಎಸ್ಎಫ್ ಕಾರ್ಯಶೈಲಿ ಮಾದರಿಯಾಗಿದ್ದು ಇಂತಹ ಇನ್ನಷ್ಟು ಜನಪರ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.
ಇಂಡಿಯನ್ ಸೋಶಿಯಲ್ ಪೋರಮ್ ರಕ್ತದಾನ ಅಭಿಯಾನದ ಮುಂದಿನ ಶಿಬಿರವು ಕುವೈತ್ ಜಾಬ್ರಿಯಾ ಬ್ಲಡ್ ಬ್ಯಾಂಕ್'ನಲ್ಲಿ ಸೆ. 25ರಂದು ಅಪರಾಹ್ನ 1ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.