ರಾಜ್ಯ ಯೋಜನಾ ಮಂಡಳಿ ಸದಸ್ಯೆಯಾಗಿ ಬೈಂದೂರಿನ ಪ್ರಿಯದರ್ಶಿನಿ ಎಂ.ಬಿ. ಆಯ್ಕೆ
ಉಡುಪಿ, ಸೆ.16: ಮಾಜಿ ಶಾಸಕ ಬಿ.ಜೆ. ಪುಟ್ಟಸ್ವಾಮಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ರಾಜ್ಯ ಯೋಜನಾ ಮಂಡಳಿಗೆ ಐವರು ಅಧಿಕಾರಿಗಳು ಹಾಗೂ 23 ನಾಮನಿರ್ದೇಶಿತ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
ಸದಸ್ಯರಾಗಿ ನೇಮಕಗೊಂಡವರಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪ್ರಿಯದರ್ಶಿನಿ ಕಮಲೇಶ್ ಎಂ.ಬಿ. ಸೇರಿದ್ದಾರೆ. ಇವರು ಕಳೆದ ಸಾಲಿನ ಬಿಜೆಪಿ ಮಹಿಳಾ ಮೋರ್ಚಾದ ಬೈಂದೂರು ಅಧ್ಯಕ್ಷರಾಗಿ, ಪ್ರಸ್ತುತ ಜೇಸಿಐ ಬೈಂದೂರು ಸಿಟಿಯ ಅಧ್ಯಕ್ಷರಾಗಿ ಹಾಗೂ ಬೈಂದೂರು ಬಿಜೆಪಿ ಪ್ರಧಾನ ಕಾರ್ಯರ್ಶಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನ ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ನ ಅಧ್ಯಕ್ಷ ಮಾರ್ಸೆಲ್ ಮೊಂತೇರೋ, ಬೆಂಗಳೂರು ಕೃಷಿ ವಿವಿಯ ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ದಾವಣಗೆರೆ ವಿವಿಯ ಕುಲಪತಿ ಪ್ರೊ.ಶರಣಪ್ಪ ವೈಜಿನಾಥ ಹಲ್ಸೆ, ಕರ್ನಾಟಕ ಧಾರವಾಡ ವಿವಿ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ರುದ್ರೇಗೌಡ ಆರ್.ಬಿರಾದಾರ, ಮೈಸೂರು ಎಂವೈಆರ್ಎಡಿಎ ಅಧ್ಯಕ್ಷ ಡಾ. ಎಸ್.ಎಸ್.ಮೀನಾಕ್ಷಿಸುಂದರಮ್ ಅವರು ಯೋಜನಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡವರಲ್ಲಿ ಸೇರಿದ್ದಾರೆ.