ಕಾಸರಗೋಡು ; ಕೊರೋನ ಸೋಂಕು ಭೀತಿ : ಅ.9ರವರೆಗೆ ನಿಷೇಧಾಜ್ಞೆ
ಕಾಸರಗೋಡು : ಜಿಲ್ಲೆಯಲ್ಲಿ ಕೊರೋನ ಸೋಂಕು ದಿನಂಪ್ರತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಅಕ್ಟೋಬರ್ 9 ರ ತನಕ 1973 ರ ಕ್ರಿಮಿನಲ್ ಕಾಯ್ದೆಯಂತೆ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ.
ನಿಷೇಧಾಜ್ಞೆ ಅ. 2ರ ರಾತ್ರಿ 12 ಗಂಟೆಯಿಂದ ಅ. 9 ರ ರಾತ್ರಿ 12 ಗಂಟೆ ತನಕ ಜಾರಿಯಲ್ಲಿರಲಿದೆ. ಕೇರಳದ ರಾಜ್ಯದಾದ್ಯಂತ ಅಕ್ಟೋಬರ್ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿತ್ತು . ಆದರೆ ಕಾಸರಗೋಡು ಜಿಲ್ಲೆಯಲ್ಲಿ ಒಂದು ವಾರಕ್ಕೆ ಸೀಮಿತ ಗೊಳಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮಂಜೇಶ್ವರ , ಕುಂಬಳೆ , ಬದಿಯಡ್ಕ , ಕಾಸರಗೋಡು , ವಿದ್ಯಾನಗರ , ಮೇಲ್ಪರಂಬ , ಬೇಕಲ , ಹೊಸದುರ್ಗ , ನೀಲೇಶ್ವರ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ , ಒಡೆಯಂಚಾಲ್ , ಪನತ್ತಡಿ ಪೇಟೆಗಳಲ್ಲಿ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು , ಸಾಬೂನ್ , ಸ್ಯಾನಿಟೈಸರ್ ಮೂಲಕ ಕೈ ಗಳನ್ನು ಶುಚಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿವಾಹ ಸಮಾರಂಭಗಳಿಗೆ 50 ಮಂದಿ , ಮರಣ ಸಂಬಂಧಿ ಕಾರ್ಯಕ್ರಮಗಳಿಗೆ 20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ.
ಧಾರ್ಮಿಕ , ಪ್ರಾರ್ಥನೆ ಕಾರ್ಯಕ್ರಮ ಗಳು , ರಾಜಕೀಯ ಪಕ್ಷಗಳ ಸಭೆಗಳು , ಸಾಂಸ್ಕೃತಿಕ , ಸಾಮಾಜಿಕ , ಸಾರ್ವಜನಿಕ ಕಾರ್ಯಕ್ರಮ ಗಳಿಗೆ 20 ಮಂದಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ.
ಸಾರ್ವಜನಿಕ ಸ್ಥಳ , ಬಸ್ಸು ನಿಲ್ದಾಣ , ಸಾರ್ವಜನಿಕ ಸಂಚಾರ , ಕಚೇರಿಗಳು , ಉದ್ಯೋಗ ಕೇಂದ್ರ ಹಾಗೂ ವ್ಯಾಪಾರ ಮಳಿಗೆ , ಆರೋಗ್ಯ ಕ್ಲಬ್ , ಕ್ರೀಡಾ ತರಬೇತಿ , ಪರೀಕ್ಷಾ ಕೇಂದ್ರ ಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಜನಜಂಗುಳಿ ಉಂಟಾಗುವ ಮಾರುಕಟ್ಟೆ , ಬಸ್ಸು ತಂಗುದಾಣ ಮೊದಲಾದೆಡೆ ಗಳಲ್ಲಿ ದಿನಕ್ಕೆ ಕನಿಷ್ಠ ಒಂದು ಬಾರಿ ರೋಗಾಣು ಮುಕ್ತ ಔಷಧಿ ಸಿಂಪಡಿಸಬೇಕು ಎಂದು ಆದೇಶ ನೀಡಲಾಗಿದೆ .ಈ ಬಗ್ಗೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ . ಜನರು ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಗೊಳಿಸುವ ನಿಟ್ಟಿನಲ್ಲಿ ಪೊಲೀಸರು ನಿಗಾ ಇರಿಸಲಿದ್ದಾರೆ.