ಆದಿತ್ಯನಾಥರನ್ನು ನಿಂದಿಸಿದ ಆರೋಪ: ಮಿಥುನ್ ರೈ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಉಡುಪಿ, ಅ.13: ನಾಥ ಪರಂಪರೆಯ ಗುರು ಮತ್ತು ಗೋರಕ್ಪುರ ಮಠದ ಪೀಠಾಧ್ಯಕ್ಷ ಯೋಗಿ ಆದಿತ್ಯನಾಥ ಮಹಾರಾಜ್ ಸ್ವಾಮಿ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ನಾಥಪಂಥದ ಜೋಗಿ ಸಮುದಾಯದ ಭಾವನೆಗಳಿಗೆ ನೋವು ಉಂಟು ಮಾಡಿರುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ನಾಥಪಂಥದ ಜೋಗಿ ಸಮಾಜ ಸೇವಾ ಸಮಿತಿ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಶಿವರಾಮ ಜೋಗಿ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ ಮಹಾರಾಜ್ ಸ್ವಾಮಿ ಬಗ್ಗೆ ಮಿಥುನ್ ರೈ ಮಾಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದರು.
ಆದಿತ್ಯನಾಥ್ರನ್ನು ಏಕವಚನದಿಂದ ನಿಂದಿಸಿ, ಮಾನಹಾನಿ ಮಾಡಿರುವ ಮಿಥುನ್ ರೈ, ಆದಿತ್ಯನಾಥ್ ಕುರಿತು ಆಡಿರುವ ಕೀಳುಮಟ್ಟದ ಮಾತುಗಳನ್ನು ವಾಪಾಸ್ಸು ಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅವರ ವಿರುದ್ಧ ಸರಕಾರ ಕಾನೂನು ಕ್ರಮ ಜರಗಿಸುವ ಮೂಲಕ ಹಿಂದೂ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮನಾಥ ಜೋಗಿ ಭಟ್ಕಳ, ರಾಜ್ಯ ಸಂಚಾಲಕ ರಮೇಶ್ ಜೋಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ ಜೋಗಿ, ಉಡುಪಿ ಜಿಲ್ಲಾಧ್ಯಕ್ಷ ಸಿ.ಸುರೇಶ್ ಜೋಗಿ, ಕುಂದಾಪುರ ಅಧ್ಯಕ್ಷ ಅಶೋಕ್ ಜೋಗಿ ಕಟ್ ಬೆಲ್ತೂರು, ಕಾರ್ಕಳ ಅಧ್ಯಕ್ಷ ಸುೇಶ್ ಜೋಗಿ ಹೆಬ್ರಿ ಉಪಸ್ಥಿತರಿದ್ದರು.