ಹಬ್ಬಗಳ ಸಂಭ್ರಮ, ದೈವ ಭಕ್ತಿ ಕೋವಿಡ್ ನಿಯಂತ್ರಣವನ್ನು ಸಡಿಲಿಸೀತೇ ?
ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುಂದಿದೆ ಸವಾಲು
ಸಾಂದರ್ಭಿಕ ಚಿತ್ರ
ಉಡುಪಿ, ಅ.22: ಅಕ್ಟೋಬರ್ ತಿಂಗಳಿಂದ ಪ್ರಾರಂಭಗೊಂಡು ಸಾಲು ಸಾಲು ಹಬ್ಬಗಳು -ನವರಾತ್ರಿ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ- ನಮ್ಮ ಮುಂದಿರುವಾಗ, ಜಿಲ್ಲೆಯ ಹೆಚ್ಚುಕಡಿಮೆ ಎಲ್ಲಾ ದೇವಸ್ಥಾನಗಳ ಬಾಗಿಲು ಭಕ್ತರಿಗಾಗಿ ತೆರೆದಿದ್ದು, ಉತ್ಸವ, ರಥೋತ್ಸವ ಹೊರತು ಪಡಿಸಿ ಭೋಜನ ಸಹಿತ ಉಳಿದೆಲ್ಲಾ ಸೇವೆಗಳು ಪ್ರಾರಂಭಗೊಂಡಿರುವಾಗ, ಸಮುದಾಯದಲ್ಲಿ ವ್ಯಾಪಿಸಿಯೂ ಉಡುಪಿ ಜಿಲ್ಲೆಯ ಮಟ್ಟಿಗೆ ಸಾಕಷ್ಟು ನಿಯಂತ್ರಣದಲ್ಲಿರುವ ಕೋವಿಡ್-19 ಇದೇ ಸ್ಥಿತಿಯಲ್ಲಿ ಮುಂದುವರಿಯಲು ಯಶಸ್ವಿಯಾದೀತೇ....?
ಇದು ಸದ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತಾತ್ಕಾಲಿಕವಾದರೂ ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಜನಸಂದಣಿ, ಜನರಲ್ಲಿ ಕಂಡುಬರುತ್ತಿರುವ ಖರೀದಿಯ ಭರಾಟೆ, ಮುಖ್ಯವಾಗಿ ಇಂಥ ಕಡೆಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳ ಕುರಿತಂತೆ ಸಾರ್ವಜನಿಕರಲ್ಲಿ ಕಂಡು ಬರುತ್ತಿರುವ ಅಸಡ್ಡೆ ಗಳನ್ನು ಕಂಡಾಗ ಈ ಪ್ರಶ್ನೆಗಳು ಸಹಜವಾಗಿಯೇ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತವೆ.
ಸದ್ಯ ಮನೆಯಿಂದ ಹೊರಬರುವಾಗ ಸಾಕಷ್ಟು ಮಂದಿ ಮಾಸ್ಕ್ಗಳನ್ನು ಧರಿಸುತಿದ್ದರೂ (ಬಾಯಿ- ಮೂಗು ಸಂಪೂರ್ಣವಾಗಿ ಮುಚ್ಚುವ ರೀತಿಯಲ್ಲಿ ಅಲ್ಲದೇ ಇದ್ದರೂ), ಸುರಕ್ಷಿತಾ ಅಂತರ ಹಾಗೂ ಸ್ಯಾನಟೈಸರ್ನ ಬಳಕೆ ಯನ್ನಂತೂ ಜನರು ಸಂಪೂರ್ಣವಾಗಿ ಮರೆತಂತೆ ಭಾಸವಾಗುತ್ತಿದೆ.
ಶಾಲಾ-ಕಾಲೇಜುಗಳನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ಚಟುವಟಿಕೆಗಳು -ಸಿನಿಮಾ, ಮಲ್ಟಿಫ್ಲೆಕ್ಸ್ನಂಥ ಕೆಲವು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ- ಇದೀಗ ಮತ್ತೆ ಪ್ರಾರಂಭಗೊಂಡಿವೆ. ಆದರೆ ಹಬ್ಬ, ದೇವಸ್ಥಾನಗಳ ವಿಷಯದಲ್ಲಿ ಭಾರತೀಯರು ದೇವರ ಮೇಲೆಯೇ ಎಲ್ಲಾ ಭಾರ ಹಾಕುವುದರಿಂದ ಇಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಲಾಗುತ್ತಿದೆ. ಇದು ಕೊರೋನ ಸೋಂಕು ಮತ್ತೆ ವ್ಯಾಪಕವಾಗಿ ಹರಡಲು ಅವಕಾಶವನ್ನು ಒದಗಿಸುತ್ತದೆ. ಅಲ್ಲದೇ ಇದೀಗ ಚಳಿಗಾಲವೂ ಕಾಲಿರಿಸುತ್ತಿರುವುದು ಕೊರೋನ ವೈರಸ್ ಸಕ್ರಿಯವಾಗಿರಲು ಪ್ರಸಕ್ತ ವಾತಾವರ ಣವೂ ಆಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮುಂದಿನ ಎರಡು -ಮೂರು ತಿಂಗಳು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ನಿಜವಾಗಿಯೂ ಅಗ್ನಿ ಪರೀಕ್ಷೆಯ ಕ್ಷಣ ಎಂದರೆ ತಪ್ಪಾಗಲಾರದು.
ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆ ಮಾರ್ಚ್ನಲ್ಲಿ ನಿಧಾನಗತಿ ಯಲ್ಲಿದ್ದರೆ, ಮೇ ಬಳಿಕ ಏರುಗತಿಗೆ ಸಾಗಿ ಆಗಸ್ಟ್ನಲ್ಲಿ ಉತ್ತುಂಗದಲ್ಲಿತ್ತು. ಇದೀಗ ಅಕ್ಟೋಬರ್ ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಪ್ರಮಾಣ ಇಳಿಮುಖದಲ್ಲಿದ್ದು, ಇದು ಕೊರೋನ ನಿಯಂತ್ರಣ ದಲ್ಲಿ ಆಶಾದಾಯಕ ಬೆಳವಣಿಗೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ಹೇಳುತ್ತಾರೆ.
ಶೇ.91.26ಕ್ಕೇರಿದ ಚೇತರಿಕೆ ಪ್ರಮಾಣ: ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 1,62,543 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿ ಸಲಾಗಿದೆ. ಇವುಗಳಲ್ಲಿ ಪಾಸಿಟಿವ್ ಬಂದವರ ಸಂಖ್ಯೆ 21,148 ಆಗಿದೆ. ಬುಧವಾರದವರೆಗೆ ಒಟ್ಟು 19,305 ಮಂದಿ ಚೇತರಿಸಿಕೊಂಡು ಮತ್ತೆ ಆರೋಗ್ಯ ಪೂರ್ಣ ಬದುಕಿಗೆ ಮರಳಿದ್ದಾರೆ. ಇದು ಒಟ್ಟು ಪ್ರಕರಣದ ಶೇ.91.29 ಆಗಿದೆ. 10ದಿನಗಳ ಹಿಂದೆ ಶೇ.89ರ ಆಸುಪಾಸಿನಲ್ಲಿದ್ದ ಈ ಪ್ರಮಾಣ ಒಮ್ಮೆಗೆ ಶೇ.2ರಷ್ಟು ಹೆಚ್ಚಳ ಕಂಡಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.89.20 ಆಗಿದ್ದರೆ, ಕರ್ನಾಟಕದಲ್ಲಿ ಇದು ಶೇ.86 ಆಗಿದೆ.
ಇನ್ನು ಜಿಲ್ಲೆಯಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ1668 ಮಾತ್ರ. ಇದು ಒಟ್ಟು ಸಂಖ್ಯೆಯ ಶೇ.7.89 ಆಗಿದೆ. ದೇಶದಲ್ಲಿ ಇದು 9.26 ಆಗಿದ್ದರೆ, ಕರ್ನಾಟಕದ್ದು ಶೇ.13ರಷ್ಟಿದೆ. ಇನ್ನು ಕೊರೋನದಿಂದ ಜಿಲ್ಲೆಯಲ್ಲಿ ಈವರೆಗೆ ಸತ್ತವರ ಸಂಖ್ಯೆ 175 ಆಗಿದ್ದು, ಇದು ಒಟ್ಟಾರೆಯಾಗಿ ಶೇ.0.83 ಆಗಿದೆ. ದೇಶದ ಸಾವಿನ ಪ್ರಮಾಣ ಶೇ.1.51 ಆಗಿದ್ದರೆ, ಕರ್ನಾಟಕದ್ದು 1.4 ಆಗಿದೆ.
ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ಬಂದವರಲ್ಲಿ ಶೇ.57ರಷ್ಟು (12052) ಮಂದಿ ಪುರುಷರಾದರೆ ಉಳಿದ ಶೇ.43 (9096) ಮಹಿಳೆಯರು. ಶೇ.6ರಷ್ಟು (1251) 10 ವರ್ಷದೊಳಗಿನ ಮಕ್ಕಳು, ಶೇ.79ರಷ್ಟು (16,622) ಮಂದಿ 11ರಿಂದ 60ವರ್ಷದೊಳಗಿನವರು ಹಾಗೂ ಶೇ.15ರಷ್ಟು (3275) 60 ವರ್ಷ ಮೇಲ್ಪಟ್ಟ ಹಿರಿಯರು ಸೇರಿದ್ದಾರೆ. ಇವರಲ್ಲಿ ಶೇ.43ರಷ್ಟು ಮಂದಿಯಲ್ಲಿ (9073) ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ಶೇ.57ರಷ್ಟು ಮಂದಿಯಲ್ಲಿ (12,075) ರೋಗದ ಲಕ್ಷಣಗಳಿಲ್ಲದಿದ್ದರೆ ಪಾಸಿಟಿವ್ ಬಂದಿತ್ತು.
ಇನ್ನು ಕೊರೋನ ಸೊಂಕಿನಿಂದ ಸತ್ತವರಲ್ಲಿ 10 ವರ್ಷಗೊಳಗಿನ ಮಕ್ಕಳು ಯಾರೂ ಇಲ್ಲ. 11ರಿಂದ 60ವರ್ಷದೊಳಗಿನ ಶೇ.38ರಷ್ಟು (52+15) ಹಾಗೂ 60 ವರ್ಷ ಮೇಲಿನ ಶೇ.62ರಷ್ಟು ಮಂದಿ (75-33) ಸೇರಿದ್ದಾರೆ. ಸತ್ತವರಲ್ಲಿ 127ಮಂದಿ ಪುರುಷರು ಹಾಗೂ 48 ಮಂದಿ ಮಹಿಳೆಯರಾಗಿದ್ದಾರೆ. ಉಡುಪಿ ತಾಲೂಕಿನ 98, ಕುಂದಾಪುರ ತಾಲೂಕಿನ 43 ಹಾಗೂ ಕಾರ್ಕಳ ತಾಲೂಕಿನ 32 ಮಂದಿ ಸತ್ತವರಲ್ಲಿ ಸೇರಿದ್ದಾರೆ.
ಈ ಎಲ್ಲಾ ಅಂಕಿಅಂಶಗಳು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಪ್ರಯತ್ನದ ಫಲವಾದರೆ, ಇನ್ನು ಮುಂದಿರುವುದು ಜನರೇ ಕೊರೋನ ಕುರಿತಂತೆ ಜವಾಬ್ದಾರಿಯನ್ನು ಪ್ರದರ್ಶಿಸುವುದು. ಜಿಲ್ಲೆಯ ಜನರು ಈಗ ಎಚ್ಚರ ತಪ್ಪಿದರೆ, ಓಣಂ ಸಂದರ್ಭದಲ್ಲಿ ಕೊರೋನ ಮಾರ್ಗಸೂಚಿಗಳ ಬಗ್ಗೆ ನಿರ್ಲಕ್ಷ ವಹಿಸಿದ ಕೇರಳ, ಈಗ ಇರುವ ಸ್ಥಿತಿ ಉಡುಪಿಯಲ್ಲೂ ಕಂಡುಬರುವ ಸಾಧ್ಯತೆಯ ಬಗ್ಗೆ ಎಚ್ಚರವಿರುವುದು.
ಶೇ.5ರಿಂದ 6ರ ನಡುವೆ ಪಾಸಿಟಿವ್ ಪ್ರಮಾಣ
ಶೇ.5ರಿಂದ 6ರ ನಡುವೆ ಪಾಸಿಟಿವ್ ಪ್ರಮಾಣ ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸಿದ ಒಟ್ಟು ಸ್ಯಾಂಪಲ್ಗಳಲ್ಲಿ ಶೇ.25ರಿಂದ 30ರಷ್ಟಿದ್ದ ಪಾಸಿಟಿವ್ ಪ್ರಮಾಣ ಸೆಪ್ಟಂಬರ್ ತಿಂಗಳ ಬಳಿಕ ನಿಧಾನವಾಗಿ ಇಳಿಯತೊಡಗಿದ್ದು, ಅಕ್ಟೋಬರ್ ಬಳಿಕ ಇದು ಶೇ.10ಕ್ಕೂ ಕೆಳಕ್ಕಿಳಿದಿದೆ. ಇದೀಗ ಈ ವಾರದುದ್ದಕ್ಕೂ ಈ ಪ್ರಮಾಣ ಶೇ.5ರಿಂದ 6ರ ನಡುವಿದೆ.
ಕಳೆದ ರವಿವಾರ ಶೇ.5.85ರಷ್ಟಿದ್ದ ಪಾಸಿಟಿವ್ ಪ್ರಮಾಣ, ಸೋಮವಾರ ಶೇ.7.65 ಆಗಿತ್ತು. ಮತ್ತೆ ಮಂಗಳವಾರ ಶೇ.5.19ಕ್ಕೆ ಇಳಿದ ಪಾಸಿಟಿವ್ ಬುಧವಾರ ಶೇ.5.74ರಷ್ಟಿತ್ತು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.
ಜಿಲ್ಲೆಯ ಮಟ್ಟಿಗೆ ಇದು ಆಶಾದಾಯಕ ಬೆಳವಣಿಗೆ. ಏಕೆಂದರೆ ಈಗ ಶೇ.85 ರಿಂದ 90ರಷ್ಟು ಆರ್ಟಿ-ಪಿಸಿಆರ್ ಪರೀಕ್ಷೆಗಳೇ ನಡೆಯುತಿದ್ದು, 10ರಿಂದ 15ರಷ್ಟು ಮಾತ್ರ ಆರ್ಎಟಿ ಪರೀಕ್ಷೆ ನಡೆಯುತ್ತಿದೆ. ಇದರಿಂದ ಈಗ ನಡೆಯುತ್ತರುವ ಮಾದರಿ ಪರೀಕ್ಷೆಗಳು ಹೆಚ್ಚು ವಿಶ್ವಾಸಾ ರ್ಹವೆನಿಸಿಕೊಂಡಿದೆ. ಇದರ ಆಧಾರದಲ್ಲಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ನಾವು ವಿಶ್ವಾಸದಿಂದ ಹೇಳಬಹುದಾಗಿದೆ ಎಂದು ಡಾ. ಸೂಡ ತಿಳಿಸಿದರು.
ಈಗ ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಯಲ್ಲಿ 2000 ಸ್ಯಾಂಪಲ್ ಗಳನ್ನು ಪರೀಕ್ಷೆಗೊಳಪಡಿಸಿದರೆ 100ರಿಂದ 125ರಷ್ಟು ಮಾತ್ರ ಪಾಸಿಟಿವ್ ಬರುತಿವೆ ಎಂದವರು ಹೇಳಿದರು.
''ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳ ಋತು ಮುಂದಿರುವುದರಿಂದ ನಾವು ಹೆಚ್ಚು ಜಾಗೃತರಾಗಿರಬೇಕಾಗುತ್ತದೆ. ಸಾರ್ವಜನಿಕರು ಒಟ್ಟು ಸೇರುವ ದೇವಸ್ಥಾನಗಳು ಹಾಗೂ ಇತರ ಸ್ಥಳಗಳಿಂದ ಜನರು ಅದರಲ್ಲೂ ಹಿರಿಯರು, ಮಕ್ಕಳು ದೂರು ಇರುವುದು ತುಂಬಾ ಮುಖ್ಯ. ಜನರು ಕೊರೋನ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿದರೆ ಇದೇ ಪರಿಸ್ಥಿತಿ ಮುಂದುವರಿ ಯಬಹುದು. ಜನರು ಸ್ವಲ್ಪ ಎಚ್ಚರ ತಪ್ಪಿದರೂ ಮತ್ತೆ ಈ ಪ್ರಮಾಣ ಅನಿಯಂತ್ರಿತವಾಗಿ ಹೆಚ್ಚಳವಾಗಬಹುದು''.
- ಡಾ. ಸುಧೀರ್ ಚಂದ್ರ ಸೂಡ, ಡಿಎಚ್ಒ ಉಡುಪಿ