ಕರಾವಳಿಯಲ್ಲಿ ಸರಳ ಮೀಲಾದುನ್ನಬಿ
ಮಂಗಳೂರು, ಅ.29: ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ ಜನ್ಮದಿನವಾದ ಮಿಲಾದುನ್ನಬಿಯನ್ನು ಕರಾವಳಿಯಾದ್ಯಂತ ಅತ್ಯಂತ ಸರಳವಾಗಿ ಗುರುವಾರ ಆಚರಿಸಲಾಯಿತು.
ಕೋವಿಡ್-19 ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವ ಯಾವುದೇ ಮೆರವಣಿಗೆ ಈ ಬಾರಿ ನಡೆದಿಲ್ಲ. ಮಸೀದಿ, ಮದ್ರಸಗಳಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜಿಸಿರಲಿಲ್ಲ. ನಗರದ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಮತ್ತು ಅದರ ಆವರಣದಲ್ಲಿರುವ ಜಲಾಲ್ ಮಸ್ತಾನ್ ದರ್ಗಾ ಸಮಿತಿಯಿಂದ ಬುಧವಾರ ರಾತ್ರಿ ಮೌಲೂದ್ ಪಾರಾಯಣ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮೀಣ ಪ್ರದೇಶದಲ್ಲೂ ಮೆರವಣಿಗೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ ಇರಲಿಲ್ಲ. ಬುಧವಾರ ರಾತ್ರಿ ಮೌಲೂದ್ ಪಾರಾಯಣ ನಡೆಯಿತು. ಕೆಲವೆಡೆ ಮಸೀದಿಗಳಲ್ಲಿ ಗುರುವಾರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರೂ, ಅಲ್ಲಿ ಊಟ ಮಾಡುವ ಬದಲಿಗೆ ಮನೆಗಳಿಗೆ ವಿತರಣೆ ಮಾಡಲಾಗಿತ್ತು
Next Story