ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು, ನ.8: ಯಕ್ಷಗಾನವನ್ನು ಶಾಲಾ ಪಠ್ಯವನ್ನಾಗಿಸುವ ಪ್ರಕ್ರಿಯೆ ಪಠ್ಯಪುಸ್ತಕ ನಿರ್ದೇಶನಾಲಯದಲ್ಲಿದ್ದು, ಪಠ್ಯಪುಸ್ತಕ ರಚನೆ ಸಮಿತಿ ನೇಮಕವಾಗಬೇಕಿದೆ. ಶೀಘ್ರದಲ್ಲೇ ಈ ಬಗ್ಗೆ ಆದೇಶ ಹೊರಡುವ ಸಾಧ್ಯತೆಯಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಪುಸ್ತಕ ಬಹುಮಾನ, 2019ನೇ ಸಾಲಿನ ಪ್ರತಿಷ್ಠಿತ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಯೋಗ, ನೃತ್ಯ, ಸಂಗೀತದಂತೆ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಮನವಿಯನ್ನು ಯಕ್ಷಗಾನ ಅಕಾಡಮಿ ಶಿಕ್ಷಣ ಸಚಿವರಲ್ಲಿ ನೀಡಿದ್ದು, ಅದಕ್ಕೆ ಸಚಿವ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅಕಾಡಮಿಯಿಂದ ತೆಂಕುತಿಟ್ಟಿನ ಬಣ್ಣದ ವೇಷಗಳ ಪರಂಪರೆಯ ದಾಖಲೀಕರಣ ಕಮ್ಮಟ ನ.9ರಂದು ಕೊಲ್ಲಂಗಾನದಲ್ಲಿ ನಡೆಯಲಿದೆ. ಯಕ್ಷಗಾನ ಕೃತಿಗಳ ಪ್ರಕಟನೆಗೆ ಅಕಾಡಮಿ ವಿಶೇಷ ಆದ್ಯತೆ ನೀಡಲಿದ್ದು, ಕೃಷ್ಣಪ್ರಕಾಶ ಉಳಿತ್ತಾಯರ ಯಕ್ಷಗಾನದ ವಾದ್ಯಗಳು ವಿಶ್ಲೇಷಣಾ ಗ್ರಂಥ ಅಕಾಡಮಿ ಮೂಲಕ ಹೊರತರಲಾಗುವುದು. ಅಕಾಡಮಿಯ ಪರಿಮಿತಿ ಹಾಗೂ ಅನುದಾನ ಮಿತಿಯಲ್ಲಿ ನಿರಂತರ ಚಟುವಟಿಕೆಗಳು ನಡೆಯಲಿದೆ ಎಂದರು.
ರಾಜ್ಯ ಯಕ್ಷಗಾನ ಅಕಾಡಮಿಯಲ್ಲಿ ಅರ್ಜಿಯನ್ನು ಹಾಕದೆ ಪ್ರಶಸ್ತಿ ನೀಡಲಾಗುತ್ತಿದೆ. ಅರ್ಜಿಯನ್ನು ಹಾಕಿದವರಿಗೆ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿಲ್ಲ. ಇದರಿಂದ ಅಕಾಡಮಿ ಅವಿಭಕ್ತವಾದ, ಅನ್ಯೋನ್ಯವಾದ ಸಂಬಂಧವನ್ನು ಹೊಂದಿರುವ ಕುಟುಂಬ ಎಂದು ಹೇಳಿದರು.
ಕೋವಿಡ್ ಸಂಕಷ್ಟ ಸಮಯದಲ್ಲೂ ತನ್ನದೇ ಆದ ಕಾರ್ಯಶೈಲಿಯಲ್ಲಿ ಯಕ್ಷಗಾನದ ಏಳಿಗೆಗೆ ಕೊಡುಗೆ ನೀಡುತ್ತಿದೆ. ಕಲೆಯ ಹಿತ ಬಹಳ ಮುಖ್ಯ. ಸರಕಾರದ ನಿಯಮ ಪಾಲನೆ ಮಾಡಿಕೊಂಡು ಪಾರದರ್ಶಕವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ರಾಜ್ಯದ ಹೆಚ್ಚು ಕ್ರಿಯಾಶೀಲ ಅಕಾಡಮಿ ಗಳಲ್ಲಿ ಯಕ್ಷಗಾನವೂ ಒಂದು ಎಂದು ಅಭಿಪ್ರಾಯಪಟ್ಟರು.
ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡಲು ಬದ್ಧವಿದೆ. ಮುಂದಿನ ದಿನಗಳಲ್ಲಿ ತುಳುನಾಡಿನ ವೈಭವದ ಯಕ್ಷಗಾನ ಕಲೆ ಮತ್ತಷ್ಟು ಸಮೃದ್ಧಿ ಕಾಣಲಿ ಎಂದರು.
ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್ ಉದ್ಘಾಟಿಸಿದರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.
ಅಕಾಡಮಿಯ ರಿಜಿಸ್ಟ್ರಾರ್ ಎಚ್.ಎಸ್. ಶಿವರುದ್ರಪ್ಪ ಸ್ವಾಗತಿಸಿದರು. ರಾಧಾಕೃಷ್ಣ ಕಲ್ಚಾರ್, ಯೋಗೀಶ್ ರಾವ್ ಚಿಗುರುಪಾದೆ, ದಾಮೋದರ್ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಐಶ್ವರ್ಯಾ ನಾಡಗೀತೆ ಹಾಡಿದರು. ಯಕ್ಷಗಾನ ಅಕಾಡಮಿ ಸದಸ್ಯ ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪುರಸ್ಕೃತರು
2019ನೇ ಸಾಲಿನ ಗೌರವ ಪ್ರಶಸ್ತಿ ಪಡೆದ ಯಕ್ಷಗಾನ ವಿದ್ವಾಂಸ ಡಾ. ಚಂದ್ರಶೇಖರ ದಾಮ್ಲೆ, 2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪಡೆದ ಭಾಗವತ ಕುರಿಯ ಗಣಪತಿ ಶಾಸಿ, ಯಕ್ಷಗುರು ಉಬರಡ್ಕ ಉಮೇಶ್ ಶೆಟ್ಟಿ, ಪುಸ್ತಕ ಬಹುಮಾನ ಪಡೆದ ಕೃಷ್ಣ ಪ್ರಕಾಶ ಉಳಿತ್ತಾಯ, ಗುರುದೇವ ಪ್ರಕಾಶನ ಪರವಾಗಿ ಯಶವಂತ್ ವಿಟ್ಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನದ ಬಗ್ಗೆ ಶಾಲಾ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ.
- ದಿವಾಕರ್ ಪಾಂಡೇಶ್ವರ್, ಮಂಗಳೂರು ಮನಪಾ ಮೇಯರ್