ಶಿಶಿಲೇಶ್ವರ ದೇಗುಲ ಮಹಾದ್ವಾರ, ಮತ್ಸ್ಯ ಸಂರಕ್ಷಣಾ ಫಲಕ ಅನಾವರಣ
ಬೆಳ್ತಂಗಡಿ; ಶಿಶಿಲವನ್ನು ಪ್ರವಾಸಿ ತಾಣವಾಗಿರೂಪಿಸುವ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶಿಶಿಲೇಶ್ವರ ದೇಗುಲ ಮಹಾದ್ವಾರ ಹಾಗೂ ದೇಗುಲದ ಬಳಿ ಮತ್ಸ್ಯ ಸಂರಕ್ಷಣಾ ಫಲಕ ಅನಾವರಣಗೊಳಿಸಿ, ಮತ್ಸ್ಯ ಸಂಕುಲದ ವೀಕ್ಷಣೆ ನಡೆಸಿ ಮಾತನಾಡಿದರು.
ಮುಖ್ಯವಾಗಿ ಈ ಕ್ಷೇತ್ರ ಅಭಿವೃದ್ಧಿಪಡಿಸಲು ಬೇಕಾದ ಯೋಚನೆ, ಯೋಜನೆ ರೂಪಿಸಲಾಗುವುದು. ಕಪಿಲಾ ನದಿಯ ಎರಡೂ ಬದಿ ಮತ್ಸ್ಯ ವೀಕ್ಷಣೆಗೆ, ವೀಕ್ಷಣಾ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆಯಿದೆ ಈ ಕುರಿತು ಚಿಂತನೆ ನಡೆಸಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಬಿಡುಗಡೆ ಮಾಡಬಹುದಾದ ಅನುದಾನದ ಕುರಿತು ಯೋಚನೆ ಮಾಡಲಾಗುವುದು. ಮುಖ್ಯವಾಗಿ ಇಂದು ನಾಮಫಲಕ ಅಳವಡಿಸಿ ದೇಗುಲದ 4ಕಿ.ಮೀ. ಸುತ್ತಮುತ್ತ ಮೀನುಗಾರಿಕೆ ನಿಷೇಧಿಸಲಾಗಿದೆ ಮತ್ತು ಸಂರಕ್ಷಣಾ ವಲಯ ಎಂಬುದಾಗಿ ಸರಕಾರದ ಪರವಾಗಿ ಘೋಷಣೆಯನ್ನು ಮೀನುಗಾರಿಕೆ ಇಲಾಖೆ ಪರವಾಗಿ ಮಾಡುತ್ತಿದ್ದೇನೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿದರು. ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಹಶೀಲ್ದಾರ್ ಮಹೇಶ್, ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ಶಿಶಿಲ ದೇವಸ್ಥಾನ ಆಡಳಿತಾಧಿಕಾರಿ ಶ್ರೀನಿವಾಸ ಮೂಡಿತ್ತಾಯ ಉಪಸ್ಥಿತರಿದ್ದರು. ಕೃಷಿ ಇಲಾಖೆ ಆಡಳಿತಾಧಿಕಾರಿ ಚಿದಾನಂದ ಹೂಗಾರ್ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು