ಕೊರೋನ ಪರಿಹಾರ ಕೊಡಿಸುವುದಾಗಿ ನಗ-ನಗದು ವಂಚನೆ: ದೂರು
ಮಂಗಳೂರು, ನ.21: ಕೊರೋನ ಪರಿಹಾರವಾಗಿ ಆಸ್ಪತ್ರೆಯಲ್ಲಿ ಎರಡು ಲಕ್ಷ ರೂ. ನೀಡುತ್ತಾರೆಂದು ಮಹಿಳೆಯೊಬ್ಬರನ್ನು ನಂಬಿಸಿ 20ಸಾವಿರ ನಗದು ಮತ್ತು ಚಿನ್ನಾಭರಣ ವಂಚನೆ ಮಾಡಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನ.20ರಂದು ಬೆಳಗ್ಗೆ 9:30ಕ್ಕೆ ತೊಕ್ಕೊಟ್ಟು ಒಳಪೇಟೆಯ ಮೆಡಿಕಲ್ ಶಾಪ್ವೊಂದರ ಸಮೀಪದ ನ್ಯಾಯ ಬೆಲೆ ಅಂಗಡಿ ಬಳಿಯಲ್ಲಿದ್ದ ಮಹಿಳೆಗೆ 35 ವರ್ಷದ ಯುವಕನು ಬಂದು ‘ತನ್ನ ಹೆಸರು ರಾಕೇಶ್ ತಾನು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದು, ಈಗ ಕೊರೋನ ಸಲುವಾಗಿ ಆಸ್ಪತ್ರೆಯಲ್ಲಿ 2ಲಕ್ಷ ರೂ. ನೀಡುತ್ತಿದ್ದು, ವಾಪಸ್ ಕಟ್ಟಲು ಇರುವುದಿಲ್ಲ. ಇವತ್ತೇ ಸಿಗುತ್ತದೆ, ಈಗಲೇ ನಿಟ್ಟೆ ಅಸ್ಪತ್ರೆಗೆ ಹೋಗುವಾ’ ಎಂದು ಹೇಳಿದ್ದಾನೆ.
ಆತನ ಮಾತುಗಳನ್ನು ನಂಬಿದ ಸಂತ್ರಸ್ತ ಮಹಿಳೆಯು, ಆತನ ಜತೆ ರಿಕ್ಷಾದಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಸ್ಪತ್ರೆಗೆ ಹೋಗಿದ್ದಾರೆ. ಈ ಸಂದರ್ಭ ಯುವಕ ‘ಈಗ ಡಾಕ್ಟರಿಗೆ ಹಣ ಕೊಟ್ಟರೆ ಮಾತ್ರ ನಮಗೆ ಎರಡು ಲಕ್ಷ ಹಣ ಸಿಗುತ್ತದೆ ಎಂದು ಹೇಳಿದ ಕಾರಣ ಮಹಿಳೆ ಕೈಯಲ್ಲಿದ್ದ 20ಸಾವಿರ ರೂ. ಹಣವನ್ನು ಆತನ ಕೈಗೆ ನೀಡಿದ್ದಾರೆ. ಇದು ಸಾಗಾಕುವುದಿಲ್ಲ. ನಿಮ್ಮ ಬಳಿ ಇದ್ದ ಚಿನ್ನವನ್ನು ಕೊಡಿ ಬಳಿಕ ಬಿಡಿಸುವಾ, ನನ್ನಲ್ಲಿ ಚಿನ್ನದ ಸರವಿದೆ, ಅದು ನನ್ನ ತಾಯಿಯದ್ದು ಅದರಲ್ಲಿ ತುಂಬಾ ಚಿನ್ನ ಇದೆ, ಇದನ್ನು ನೀವು ಇಟ್ಟುಕೊಳ್ಳಿ ಎಂದು ಹೇಳಿ ಮಹಿಳೆಯ ಬಳಿಯಿದ್ದ ಚಿನ್ನದ ಕರಿಮಣಿ ಸರ ಪಡೆದುಕೊಂಡು ಹೋಗಿದ್ದಾನೆ. ಬಳಿಕ ಯುವಕ ವಾಪಸಾಗಿಲ್ಲ. ಮಹಿಳೆ ಚಿನ್ನದ ಕರಿಮಣಿ ಸರ ಮೌಲ್ಯ 60,000ರೂ. ಮತ್ತು 20,000 ನಗದು ಪಡೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.