ಸಂವಿಧಾನದ ಅನೇಕ ಕಾನೂನುಗಳು ಇಂದಿಗೆ ಅಪ್ರಸ್ತುತ: ಶಾಂತರಾಮ್ ವಾಗ್ಲೆ
ಪಡುಬಿದ್ರಿ, ನ.26: ಸಂವಿಧಾನ ಅನೇಕ ಕಾನೂನುಗಳು ಇಂದಿಗೆ ಅಪ್ರಸ್ತುತ ವಾಗಿವೆ. ಇಂತಹ ಕಾನೂನುಗಳನ್ನು ತೆಗೆದು ಹಾಕಬೇಕಾಗಿದೆ ಎಂದು ಮುಂಡ್ಕೂರು ವಿದ್ಯಾವರ್ದಕ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪ ನ್ಯಾಸಕ ಶಾಂತರಾಮ್ ವಾಗ್ಲೆ ಹೇಳಿದ್ದಾರೆ.
ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅದಮಾರು ಘಟಕ ಆಶ್ರಯದಲ್ಲಿ ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು. ಸಂವಿಧಾನದ ಬಗ್ಗೆ ನಮಗೆ ಗೌರವವಿರಬೇಕು. ನಮ್ಮ ನಡವಳಿಕೆ ಸಂವಿಧಾನಕ್ಕೆ ಎಂದಿಗೂ ವಿರುದ್ಧವಾಬಾರದು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ಮಾತನಾಡಿ, ಸಂವಿಧಾನಕ್ಕೆ ಅಪಚಾರವೆಸಗಬಾರದು. ವಿದ್ಯಾರ್ಥಿಗಳು ಎಲ್ಲರೂ ಸಂವಿಧಾನ ವನ್ನು ಓದಿ ಅದರಲ್ಲಿ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಶ್ರೀಕಾಂತ್ ರಾವ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಉಡುಪ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ಉಪನ್ಯಾಸಕ ವಿಜಯೇಂದ್ರರು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಅಂಕಿತಾ ವಂದಿಸಿದರು. ಪ್ರತಿಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಸಾರ ಮಾಡಲಾಯಿತು.