ದ.ಕ. ಜಿಲ್ಲಾ ಕಾಂಗ್ರೆಸ್ನಿಂದ ಅಹ್ಮದ್ ಪಟೇಲ್ ರಿಗೆ ಶ್ರದ್ಧಾಂಜಲಿ
ಮಂಗಳೂರು, ನ.26: ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭೆ ಸದಸ್ಯ ಅಹ್ಮದ್ ಪಟೇಲ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನುಡಿ ನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಗಾಂಧಿ ಕುಟುಂಬದ ಆಪ್ತರಾಗಿದ್ದ ಅಹ್ಮದ್ ಪಟೇಲ್, ತಾಪಂ ಚುನಾವಣೆ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ನಂತರದ ದಿನಗಳಲ್ಲಿ ಉನ್ನತ ಮಟ್ಟದ ನಾಯಕರಾಗಿ ಬೆಳೆದರು. ಅಹ್ಮದ್ ಪಟೇಲರು ಕಾಂಗ್ರೆಸ್ ಪಕ್ಷದ ಆಧಾರ್ ಸ್ಥಂಭದಂತಿದ್ದರು. ಅವರ ಅಗಲುವಿಕೆ ಪಕ್ಷದ ಓರ್ವ ನಾಯಕನನ್ನಾಗಿ ಮಾತ್ರವಲ್ಲದೆ, ನಿಷ್ಠಾವಂತ ಕಾರ್ಯಕರ್ತನನ್ನು ಕಳೆದು ಕೊಂಡಂತಾಗಿದೆ ಎಂದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷೆ ಶಾಂತಳಾ ಗಟ್ಟಿಯ ಪತಿ ಯೋಗೀಶ್ ಗಟ್ಟಿ ಹಾಗೂ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನಕ್ಕೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಸುರೇಂದ್ರ ಕಂಬಳಿ, ಜೆ. ಅಬ್ದುಲ್ ಸಲೀಂ, ಸದಾಶಿವ ಉಳ್ಳಾಲ, ಶಾಹುಲ್ ಹಮೀದ್ ಕೆಕೆ, ವಿಶ್ವಾಸ್ ಕುಮಾರ್ ದಾಸ್, ಸುಭೋದ್ ಆಳ್ವ, ಅಬ್ಬಾಸ್ ಅಲಿ, ಮಹಾನಗರ ಪಾಲಿಕೆ ಹಾಲಿ ಹಾಗೂ ಮಾಜಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.