ಯುಪಿಸಿಎಲ್ನಿಂದ ಬೆಳಪು ಗ್ರಾಪಂನಲ್ಲಿ ವನಮಹೋತ್ಸವ
ಕಾಪು, ನ. 29: ಎಲ್ಲೂರು ಯುಪಿಸಿಎಲ್, ಅದಾನಿ ಫೌಂಡೇಶನ್ ಸಹಯೋಗದೊಂದಿಗೆ ಬೆಳಪು ಗ್ರಾಮ ಪಂಚಾಯತ್ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ವನ್ನು ರವಿವಾರ ಆಯೋಜಿಸಲಾಗಿತ್ತು.
ಅದಾನಿ ಸಿಎಸ್ಆರ್ ಯೋಜನೆಯಡಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಬೆಳಪು ಗ್ರಾಪಂ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಸಸಿಯನ್ನು ನೆಟ್ಟು, ನೆರದಂತಹ ಗ್ರಾಮಸ್ಥರಿಗೆ ಉತ್ತಮ ತಳಿಯ ತೆಂಗು, ಅಡಿಕೆ, ಮಾವು, ಪೇರಳೆ, ನೇರಳೆ, ಚಿಕ್ಕೂ, ಹಲಸು ಇತ್ಯಾದಿ 10 ವಿವಿಧ ಲ ನೀಡುವ ಸಸಿಗಳ ಜೊತೆಗೆ ರೇಂಜಾ, ಟೀಕ್ ಹೆಬ್ಬಲಸು ಸಸಿಗಳನ್ನು ವಿತರಿಸಿದರು.
ಕಿಶೋರ್ ಆಳ್ವ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಂಸ್ಥೆಯ ಸಿಎಸ್ಆರ್ ಯೋಜನೆಯಡಿಯಲ್ಲಿ ಸುಮಾರು 10,000 ಸಸಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಅರಣ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆದರೆ ಕೋವಿಡ್ನಿಂದಾಗಿ ಈ ವರ್ಷ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತರಲು ಸ್ವಲ್ಪವಿಳಂಬವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಪು ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ವಿಶ್ವಕರ್ಮ ಸಂಘದ ಬಾಲಕೃಷ್ಣ ಆಚಾರ್ಯ, ಗ್ರಾಪಂ ಮಾಜಿ ಸದಸ್ಯರು, ಅದಾನಿ ಯುಪಿಸಿಎಲ್ ಸಂಸ್ಥೆಯ ಡಿಜಿಎಂ ರವಿ ಆರ್.ಜೇರೆ ಉಪಸ್ಥಿತರಿದ್ದರು.