ಉಳ್ಳಾಲ ಮೀನುಗಾರಿಕಾ ಬೋಟು ದುರಂತ: ಇಬ್ಬರ ಮೃತದೇಹ ಪತ್ತೆ
ಮಂಗಳೂರು, ಡಿ.1: ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೋಟ್ ದುರಂತದ ವೇಳೆ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಪಾಂಡುರಂಗ ಸುವರ್ಣ(58), ಚಿಂತನ್ (21) ಎಂಬವರ ಮೃತದೇಹ ಪತ್ತೆಯಾಗಿದೆ. ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಇವರಿಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ. ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ಬೋಟು ಸೋಮವಾರ ಸಂಜೆ 6:30ರ ಸುಮಾರಿಗೆ ಮುಳುಗಡೆಯಾಗಿತ್ತು. ಈ ವೇಳೆ ಅದರಲ್ಲಿದ್ದ 25 ಮೀನುಗಾರರ ಪೈಕಿ ಆರು ಮಂದಿ ನಾಪತ್ತೆಯಾಗಿದ್ದರು.
ನಾಪತ್ತೆಯಾಗಿರುವ ಉಳಿದ ನಾಲ್ವರು ಮೀನುಗಾರರಾದ ಪ್ರೀತಂ(25), ಝಿಯಾವುಲ್ಲಾ(32), ಅನ್ಸಾರ್(31) ಮತ್ತು ಹಸೈನಾರ್(25) ಎಂಬವರ ಪತ್ತೆಗೆ ಹಲವು ಬೋಟುಗಳು ಅವಘಡ ಸಂಭವಿಸಿದ ಸ್ಥಳದಲ್ಲಿ ಶೋಧ ಮುಂದುವರಿಸಿವೆ.
Next Story