ಸುವರ್ಣ ತ್ರಿಭುಜ ನಾಪತ್ತೆ; ಕೇಂದ್ರದಿಂದ ಪರಿಹಾರ ನೀಡದೆ ಅನ್ಯಾಯ: ರಮೇಶ್ ಕಾಂಚನ್
ಉಡುಪಿ, ಡಿ.1: ಸುವರ್ಣ ತ್ರಿಭುಜ ಬೋಟಿನೊಂದಿಗೆ ನಾಪತ್ತೆಯಾದ ಏಳು ಮಂದಿ ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರಕಾರ ಯಾವುದೇ ಪರಿಹಾರ ನೀಡದೆ ಅನ್ಯಾಯ ಎಸಗಿದೆ. ಕೇಂದ್ರದಿಂದ ನಯಾ ಪೈಸೆ ಬಿಡುಗಡೆ ಬಗ್ಗೆ ಕರಾವಳಿಯ ಸಂಸದರು ಚಕಾರ ಎತ್ತುತ್ತಿಲ್ಲ ಎಂದು ಉಡುಪಿ ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆರೋಪಿಸಿದ್ದಾರೆ.
ಈ ಬೋಟ್ ದುರಂತ ನಡೆದು ಎರಡು ವರ್ಷವಾದರೂ, ಇನ್ನೂ ಈ ಘಟನೆಯ ತನಿಖೆ ಬಗ್ಗೆಯಾಗಲೀ, ಮೀನುಗಾರರಿಗೆ ಮತ್ತು ಅವರ ಕುಟುಂಬಕ್ಕೆ ಯಾವುದೇ ಸ್ಪಷ್ಟ ಚಿತ್ರಣವನ್ನು ಕೇಂದ್ರ ಸರಕಾರ ನೀಡಿಲ್ಲ. ಇದರ ಬಗ್ಗೆ ಕರಾ ವಳಿಯ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ ಮಾತನಾಡುತ್ತಿಲ್ಲ. ಇವರು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರಕ್ಕೂ ಪ್ರಯತ್ನಿಸದಿರುವುದು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story