ರಸ್ತೆ ಅಪಘಾತ : ಗಾಯಗೊಂಡಿದ್ದ ಮಗು ಮೃತ್ಯು
ಉಳ್ಳಾಲ : ಎರಡು ದಿನಗಳ ಹಿಂದೆ ಉಳ್ಳಾಲ ಬೈಲಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ನೀರಿನ ಟ್ಯಾಂಕರ್ ಅಡಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಮಗುಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಮೂಲತಃ ಉತ್ತರ ಪ್ರದೇಶ ಮೂಲದ, ಉಳ್ಳಾಲಬೈಲು ಬಾಕಿಮಾರ್ ನಲ್ಲಿ ಬಾಡಿಗೆ ನಿವಾಸದಲ್ಲಿರುವ ಶರವಣ್ ಕುಮಾರ್ ಮತ್ತು ಪಿಂಕಿ ದಂಪತಿ ಪುತ್ರ ಕೃಷ್ಣ ಮೃತ ಬಾಲಕ.
ಸೋಮವಾರ ಸಂಜೆ ತಾಯಿ ಮತ್ತು ಸಹೋದರ, ಸಹೋದರಿಯರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಟ್ಯಾಂಕರ್ ಹರಿದ ಪರಿಣಾಮ ಮಗು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಕ್ಕಳ ಕುಟುಂಬವು ಉಳ್ಳಾಲ ಬೀಚ್ ಗೆ ವಿಹಾರಕ್ಕೆಂದು ತೆರಳಿ ಹಿಂದಿರುಗುವಾಗ ದುರ್ಘಟನೆ ನಡೆದಿತ್ತು.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story