ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ: ಹಣ ದುರುಪಯೋಗಕ್ಕೆ ಅವಕಾಶ ಇಲ್ಲ: ಪೇಜಾವರ ಶ್ರೀ
ಉಡುಪಿ, ಡಿ.5: ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ರಾಮ ಮಂದಿರ ನಿರ್ಮಾಣಕ್ಕೆ 1,300-1,400 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕಾಗಿ ನಿಧಿ ಸಂಗ್ರಹವು ವಿಶ್ವ ಹಿಂದು ಪರಿಷತ್ ಉಸ್ತುವಾರಿಯಲ್ಲೇ ನಡೆಯುತ್ತದೆ. ಆದುದರಿಂದ ಹಣದ ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಸ್ಟ್ನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಧಿ ಸಂಗ್ರಹ ದೀರ್ಘಕಾಲ ಇರುವುದಿಲ್ಲ. ವಿಹಿಂಪ ಕಾರ್ಯಕರ್ತರ ಮೂಲಕವೇ ಹಣ ಸಂಗ್ರಹ ಕಾರ್ಯ ನಡೆಯುತ್ತದೆ. ಕಾರ್ಯಕರ್ತರು ಬಂದಾಗ ಮಾತ್ರ ಹಣ ಕೊಡಿ, ಇಲ್ಲವೇ ನೇರವಾಗಿ ಟ್ರಸ್ಟ್ನ ಅಕೌಂಟಿಗೆ ಹಣ ಜಮಾ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಭಕ್ತರು ನಿಧಿ ದೇಣಿಗೆ ನೀಡಲು ಉತ್ಸುಕರಾಗಿದ್ದಾರೆ. ಮಕರ ಸಂಕ್ರಾಂತಿಯ ನಂತರ ವಿಹಿಂಪ ಕಾರ್ಯಕರ್ತರು ನಿಧಿ ಸಂಗ್ರಹ ಮಾಡಲಿದ್ದಾರೆ. ಒಟ್ಟು 45 ದಿನಗಳ ಕಾಲ ಈ ಅಭಿಯಾನ ನಡೆಯುತ್ತದೆ. ಕಾರ್ಯಕರ್ತರು ದೇಶದ ಮೂಲೆ ಮೂಲೆಯ ಗ್ರಾಮಗಳಲ್ಲಿ ಮನೆಗಳನ್ನು ಸಂಪರ್ಕ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಕನಿಷ್ಠ 10 ರೂ. ನೀಡಬಹುದು. ಹತ್ತು ರೂ. ದೇಣಿಗೆಗೂ ಕೂಪನ್ ಮಾಡಲಾಗಿದೆ. ಮನೆಗೊಂದರಂತೆ 100 ರೂ. ನೀಡಬಹುದು ಎಂದವರು ಹೇಳಿದರು.