ಸ್ವಯಂ ಸೇವೆಯ ಕಿಚ್ಚು ನಮ್ಮಳಗಿನಿಂದ ಬರಲಿ: ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ
ಮಂಗಳೂರು, ಡಿ.5: ಸ್ವಯಂ ಸೇವೆ ನಿರಂತರ ಪ್ರಕ್ರಿಯೆ. ನಮ್ಮ ಇಚ್ಚಾಶಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಅದ್ಭುತ ಸಾಧಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇಂದು ಭಾರತ ಸರಕಾರದ ಯುವಜನ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ಕ್ರಾಸ್ ಘಟಕ, ಸೆಂಟರ್ ಫಾರ್ ಇಂಟಗ್ರೇಡೆಡ್ ಲರ್ನಿಂಗ್ ಮತ್ತು ಮಂಗಳೂರು ಸರ್ಫ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕ ರೋಗ ನಮ್ಮಲ್ಲಿ ಸ್ವಯಂ ಸೇವೆಯ ಕಿಚ್ಚು ಹೆಚ್ಚಿಸಿದೆ ಮತ್ತು ಧನಾತ್ಮಕ ಯೋಚನೆಯ ಪಾಠ ಕಲಿಸಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಮಾನತಾಡಿ, ಕೋವಿಡ್ ಸಂಕಷ್ಟದ ಸಂದರ್ಭ ರೆಡ್ಕ್ರಾಸ್ ಸ್ವಯಂ ಸೇವಕರು ಜೀವದ ಹಂಗು ತೊರೆದು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದಿನ ಮೂರು ತಿಂಗಳು ಮಾಡಬೇಕಾದ ಕೆಲಸಗಳ ಪಟ್ಟಿ ಸಿದ್ಧವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎ. ಹರೀಶ್, ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ನ ಕಾರ್ಯ ನಿರ್ವಾಹಕ ನಿರ್ದೇಶಕಿ ಸಚಿತಾ ನಂದ ಗೋಪಾಲ್, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಂಯೋಜಕ ರಘುವೀರ್ ಸೂಟರ್ಪೇಟೆ, ವಿಶ್ವವಿದ್ಯಾನಿಲಯದ ರೆಡ್ಕ್ರಾಸ್ ನೋಡೆಲ್ ಅಧಿಕಾರಿ ಡಾ. ಗಣಪತಿ ಗೌಡ, ರೆಡ್ಕ್ರಾಸ್ ಜಿಲ್ಲಾ ಸಂಯೋಜಕ ಸಾಚೇತ್ ಸುವರ್ಣ ಭಾಗವಹಿಸಿದ್ದರು.
ಈ ಸಂದರ್ಭ ಪೇಪರ್ ಸೀಡ್ನ ನಿತಿನ್ ವಾಸ್, ಮಂಗಳೂರು ಗ್ರೀನ್ ಬ್ರಿಗೇಡ್ನ ಜೀತ್ ಮಿಲನ್ ರೋಚ್, ಮಂಗಳೂರು ಸರ್ಫ್ ಕ್ಲಬಹ್ನ ಮಿಥುನ್ ಭಟ್ ಕಕ್ಕುಂಜೆ ಮೊದಲಾದವರು ಅನುಭವ ಹಂಚಿಕೊಂಡರು. ಹಿರಿಯ ಪತ್ರಕರ್ತ ಶ್ರೀನಿವಾಸ್ ನಂದಗೋಪಲ್ ಕಾರ್ಯಕ್ರಮ ನಿರ್ವಹಿಸಿದರು.