ಅಜೆಕಾರು: ಅರ್ಬಿ ಫಾಲ್ಸ್ಗೆ ಬಿದ್ದು ಯುವಕ ಸಂಶಯಾಸ್ಪದ ಸಾವು
ಅಜೆಕಾರು, ಡಿ.21: ಕೆರ್ವಾಶೆ ಗ್ರಾಮದ ಅರ್ಬಿ ಫಾಲ್ಸ್ಗೆ ಡಿ.20ರಂದು ಸಂಜೆ ವೇಳೆ ಯುವಕನೋರ್ವ ಸಂಶಯಾಸ್ಪದವಾಗಿ ಬಿದ್ದು ಮೃತಪಟ್ಟ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಕಿರಣ್(21) ಎಂದು ಗುರುತಿಸಲಾಗಿದೆ. ಮೂಡಬಿದ್ರೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಿರಣ್, ಸುನಿಲ್ ಪೂಜಾರಿ, ಪುರು ಷೋತ್ತಮ, ರವಿಚಂದ್ರ, ಶೈಲೇಶ್ ಶೆಟ್ಟಿ ಎಂಬವರು ಸುನೀಲ್ ಪೂಜಾರಿಯ ಹುಟ್ಟುಹಬ್ಬದ ಆಚರಣೆಗಾಗಿ ಮಧ್ಯಾಹ್ನ ವೇಳೆ ಅರ್ಬಿ ಫಾಲ್ಸ್ಗೆ ಬಂದಿದ್ದು, ಇವರಲ್ಲಿ ಕಿರಣ್ ಮಲ ವಿರ್ಸಜನೆ ಮಾಡಲೆಂದು ಫಾಲ್ಸ್ನ ಇನ್ನೊಂದು ಬದಿಗೆ ಹೋದವನು ನಾಪತ್ತೆಯಾಗಿದ್ದನು. ಈ ವಿಚಾರವನ್ನು ಉಳಿದವರು ಸಂಜೆ ವೇಳೆ ಅಲ್ಲೇ ಸಮೀಪದ ಸುನೀಲ್ ಶೆಟ್ಟಿ ಎಂಬವರ ಮನೆಗೆ ತೆರಳಿ ತಿಳಿಸಿದ್ದರು ಎನ್ನಲಾಗಿದೆ.
ಅದರಂತೆ ಸುನೀಲ್ ಶೆಟ್ಟಿ ಹಾಗೂ ಸ್ಥಳೀಯರು ಸ್ಥಳಕ್ಕೆ ತೆರಳಿ ಕಿರಣ್ಗಾಗಿ ಹುಡುಕಾಟ ನಡೆಸಿದ್ದರು. ಬಳಿಕ ಮುಳುಗು ತಜ್ಞರಾದ ಮಯ್ಯದ್ದಿ ಹಾಗೂ ತೇಜಸ್ ಎಂಬವರನ್ನು ಕರೆಯಿಸಿ ನೀರಿನಲ್ಲಿ ಹುಡುಕಾಟ ನಡೆಸಿದ್ದು, ರಾತ್ರಿ 8:35 ಗಂಟೆಗೆ ಸುಮಾರಿಗೆ ಕಿರಣ್ ಮೃತದೇಹವನ್ನು ನೀರಿ ನಲ್ಲಿ ಪತ್ತೆಯಾಗಿತ್ತು. ಈ ಸಾವಿನ ಬಗ್ಗೆ ಅನುಮಾನವಿರುವುದಾಗಿ ಸುನೀಲ್ ಶೆಟ್ಟಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.