ಬಂಡವಾಳಗಾರರನ್ನು ಬೆಳೆಸಲು ರೈತ-ಕಾರ್ಮಿಕರ ಹಿತ ಬಲಿ: ವರಲಕ್ಷ್ಮೀ
ಕೇಂದ್ರ ಸರಕಾರದ ಹೊಸ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ
ಕುಂದಾಪುರ,ಜ.1: ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಕೇಂದ್ರ ಸರಕಾರವು ರೂಪಿಸಿರುವ ಹೊಸ ಕಾರ್ಮಿಕ ಸಂಹಿತೆಗಳು, ರೈತರ ಸಂಬಂಧಪಟ್ಟ ಮೂರು ಕೃಷಿ ವಿರೋಧಿ ಕಾಯ್ದೆ, ವಿದ್ಯುತ್ ಕಾಯ್ದೆ 2020ರ ಗಜೆಟ್ ನೋಟಿಪಿಕೇಶನ್ ಪ್ರತಿಗಳನ್ನು ಇಂದು ದಹಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ನಡೆದ ಸಭೆಯ ಮೊದಲು ಜನರಿಗೆ ಮಾರಕವಾಗಿರುವ ಹೊಸ ಕಾಯ್ದೆಗಳ ಸರಕಾರದ ಜೆಟ್ ನೋಟಿಪಿಕೇಷನ್ ದಹಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸಲು ರೈತ-ಕಾರ್ಮಿಕರ ಹಿತವನ್ನು ಬಲಿಕೊಡಲಾಗುತ್ತಿದೆ. ಈ ನೀತಿಗಳನ್ನು ಸೋಲಿಸಲು 2021ರ ಹೊಸ ವರ್ಷದಲ್ಲಿ ರೈತರು ಕಾರ್ಮಿಕರ ಹೋರಾಟ ವರ್ಷವಾಗಿ ಮುನ್ನೆಡೆದು ದೇಶ ರಕ್ಷಣೆ ಮಾಡಬೇಕಾಗಿದೆ. ಕಾರ್ಮಿಕರ ಹಕ್ಕು ಗಳನ್ನು ಉಳಿಸಲು, ರೈತರ ಬದುಕನ್ನು ರಕ್ಷಿಸಲು, ಕಾರ್ಪೋರೇಟ್ ಹಿಡಿತದಿಂದ ದೇಶ ಕಾಪಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕರಾದ ಎಚ್. ನರಸಿಂಹ, ದಾಸ ಭಂಡಾರಿ, ಸುಶೀಲ ನಾಡ, ನಾಗರತ್ನ, ಸಿಂಗಾರಿ, ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಸಿಐಟಿಯು ಕಛೇರಿಯಲ್ಲಿಯೂ ಕಾಯ್ದೆ ಪ್ರತಿಗಳನ್ನು ದಹಿಸಿ ಪ್ರತಿಭಟಿಸಲಾಯಿತು. ಈ ವೇಳೆ ಸುನೀತಾ ಶೆಟ್ಟಿ, ಶೇಖರ ಕುಲಾಲ್ ಮೊದಲಾದವರು ಹಾಜರಿದ್ದರು.
ಕುಂದಾಪುರದ ಮಂಗಳೂರು ಟೈಲ್ಸ್, ಪ್ರಭಾಕಿರಣ ಕಾರ್ಖಾನೆಗಳಲ್ಲಿಯೂ ಪ್ರತಿಭಟಿಸಿ ನಡೆಸಿ ಪ್ರತಿಗಳನ್ನು ದಹಿಸಲಾಯಿತು. ಈ ಸಂದರ್ಭದಲ್ಲಿ ಪಂಜು ಪೂಜಾರಿ, ಪ್ರಕಾಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು.