ಬಿಜೆಪಿ ವಿರೋಧಿ ಹೇಳಿಕೆ ನೀಡಿದ ಆರೋಪ : ಮಹಿಳೆಗೆ ಗ್ಯಾಂಗ್ರೇಪ್ ಬೆದರಿಕೆ !
ನ್ಯಾಯವಾದಿಯನ್ನೊಳಗೊಂಡ ಮಹಿಳಾ ತಂಡದಿಂದ ದೂರು ದಾಖಲು
ಮಂಗಳೂರು, ಜ. 2: ಬಿಜೆಪಿಯ ಮತೀಯ ರಾಜಕಾರಣದ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ಫೇಸ್ಬುಕ್ನಲ್ಲಿ ಗ್ಯಾಂಗ್ರೇಪ್ ಬೆದರಿಕೆ ಹಾಕಲಾಗಿದ್ದು, ಈ ಕುರಿತು ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯರ್ತೆ ಪ್ರಮೀಳಾ ಅವರು, ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಹೇಳಿಕೆಯೊಂದನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬ ಇಂಥವರನ್ನು ಗ್ಯಾಂಗ್ರೇಪ್ ಮಾಡಬೇಕು. 'ಎಲ್ಲಾ ಹಿಂದೂ ಅಭಿಮಾನಿಗಳ ಅಭಿಪ್ರಾಯ ತಪ್ಪು ತನ್ನದೇ ಅಭಿಪ್ರಾಯ ನಿಜ ಎಂದು ದೇಶದ್ರೋಹಿ ತರ ಮಾತನಾಡುತ್ತಾಳೆ' ಎಂಬ ಮಾತಿನೊಂದಿಗೆ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದಾನೆ.
ಆತನ ವಿಕೃತ ಮನಸ್ಥಿತಿಯ ಕುರಿತಂತೆ ಫೇಸ್ಬುಕ್ನಲ್ಲಿ ವ್ಯಾಪಕ ಆಕ್ಷೇಪ, ವಿರೋಧ, ಅಸಮಾಧಾನ ವ್ಯಕ್ತವಾಗಿರುವುದರ ಜತೆಗೆ ಮಹಿಳಾ ನ್ಯಾಯವಾದಿಯ ನೇತೃತ್ವದಲ್ಲಿ ಮಹಿಳಾ ತಂಡ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದೆ.
ನಗರದ ವಿವಿಧ ಸಂಘಟನೆಗಳ ಪ್ರಮುಖರು ಪ್ರಮೀಳಾರಿಗೆ ಬೆಂಬಲ ಸೂಚಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅತ್ಯಾಚಾರದ ಬೆದರಿಕೆ ಒಡ್ಡಿದ ವಿಕೃತ ಮನಸ್ಸಿಗರಿಗೆ ಶಿಕ್ಷೆಯಾಗಬೇಕೆಂಬ ಆಗ್ರಹ ವ್ಯಕ್ತವಾಗಿದೆ.