ಸಾವಿತ್ರಿ ಫುಲೆ ಹಾದಿಯಲ್ಲಿ ದಲಿತ ಮಹಿಳೆಯರು ಸಾಗಬೇಕು: ಜಯನ್ ಮಲ್ಪೆ
ಮಲ್ಪೆ, ಜ.3: ದಲಿತ ಲೋಕದ ಅಕ್ಷರ ಜ್ಯೋತಿ, ವಿದ್ಯಾಮಾತೆ ಸಾವಿತ್ರಿ ಜ್ಯೋತಿ ಬಾಫುಲೆ ದಲಿತರಿಗೆ ವಿದ್ಯೆ ಕಲಿಸಿದ ಗುರು. ಈ ವಿದ್ಯಾ ಮಾತೆಯ ಹಾದಿಯಲ್ಲಿ ದಲಿತ ಮಹಿಳೆಯರು ಸಾಗಿದರೆ ಮಾತ್ರ ಈ ನಾಡಿನಲ್ಲಿ ಕ್ಷೀಪ್ರ ಕಾಂತ್ರಿಗೆ ದಾರಿಯಾಗಲು ಸಾಧ್ಯ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ವತಿಯಿಂದ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ರವಿವಾರ ಆಯೋಜಿಸಲಾದ ಸಾವಿತ್ರಿ ಭಾಯಿ ಪುಲೆಯವರ 190ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾವಿತ್ರಿ ಪುಲೆ ಈ ಜಾತಿವ್ಯವಸ್ಥೆಯಲ್ಲಿ ಅನುಭವಿಸಿದ ನೋವನ್ನು ನಮ್ಮ ದಲಿತ ಮಹಿಳೆಯರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಬಡಜನರ ಶೈಕ್ಷಣಿಕ ಅಭಿವೃದ್ಧಿಗಾಗಿ ಅವರು ಅನುಭವಿಸಿದ ನೋವನ್ನು ನಮ್ಮ ವಿದ್ಯಾವಂತ ದಲಿತ ಸಮಾಜ ಸ್ಮರಿಸದಿರುವುದು ನಿಜಕ್ಕೂ ನೋವಿನ ವಿಚಾರ. ನಮಗೆ ವಿದ್ಯೆ ನೀಡಿದ ನಿಜವಾದ ತಾಯಿಯನ್ನು ಮರೆಯಬಾರದು ಎಂದರು.
ದಲಿತ ಮುಖಂಡ ಸುಂದರ ಕಪ್ಪೆಟ್ಟು ಮಾತನಾಡಿ, ಶೋಷಿತ ಸಮಾಜದಲ್ಲಿ ಸ್ವಾಭಿಮಾನ ಮೂಡಿಸುವ ದಲಿತ ನಾಯಕರು ಮೊದಲು ಸಾವಿತ್ರಿ ಜ್ಯೋತಿ ಬಾಪುಲೆಯನ್ನು ದಲಿತ ಲೋಕಕ್ಕೆ ಅರ್ಥ್ಯಸಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಸ್ ಸಾಲ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಶಾರದ ನೆರ್ಗಿ, ಶಶಿಕಲಾ ತೊಟ್ಟಂ, ರಾಜೇಶ್ ಕೆಮ್ಮಣ್ಣು, ಯುವನಾಯಕ ಸುಮಿತ್ ನೆರ್ಗಿ, ವಿನೋದ, ದಿನೇಶ್ ಜವನೆರಕಟ್ಟೆ, ಕೃಷ್ಣ ಶ್ರೀಯಾನ್, ಸಂತೋಷ್ ಕಪ್ಪಟ್ಟು, ದೀಪಕ್ ಕೊಡವೂರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಸುಮ ನೆರ್ಗಿ, ವೀಣಾ, ಪೂರ್ಣಿಮಾ ಶಂಕರ್, ಸಭಿತಾ, ಶಾರದ, ಸುಜಾತ ಮೊದಲಾದವರು ಉಪಸ್ಥಿತರಿದ್ದರು. ಭಗವಾನ್ ನೆರ್ಗಿ ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು. ಗಣೇ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು.