ತೊಕ್ಕೊಟ್ಟು : ತಾತ್ಕಾಲಿಕ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ತೊಕ್ಕೊಟ್ಟು : ಇಲ್ಲಿನ ನಗರ ಸಭಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಬೀಫ್ ಸ್ಟಾಲೊಂದು ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ದುಷ್ಕರ್ಮಿಗಳು ಹಚ್ಚಿರುವುದಾಗಿ ಶಂಕಿಸಲಾಗಿದೆ.
ಕಳೆದ 50 ವರ್ಷಗಳಿಂದ ತೊಕ್ಕೊಟ್ಟು ಮಾರುಕಟ್ಟೆಯಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದ 4 ತಾತ್ಕಾಲಿಕ ಶೆಡ್ ಗೆ ದುಷ್ಕರ್ಮಿಗಳು ಕಳೆದ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ .ಇದರಿಂದ ಅಲ್ಲಿರುವ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿವೆ.
ಫಟನಾ ಸ್ಥಳಕ್ಕೆ ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಮಾಜಿ ಅಧ್ಯಕ್ಷ ರಾದಬಾಜಿಲ್ ಡಿಸೋಜ, ಯು.ಎ. ಇಸ್ಮಾಯಿಲ್, ಸದಸ್ಯರಾದ ಇಬ್ರಾಹಿಂ ಅಶ್ರಫ್, ಅಬ್ದುಲ್ ಅಝೀಝ್ ಕೋಡಿ, ವರ್ತಕರ ಸಂಘದ ಅಬ್ದುಲ್ ಕರೀಂ, ಮನ್ಸೂರ್ ಉಳ್ಳಾಲ ಹಾಗೂ ಅನ್ಸಾರ್ ಅಳೇಕಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
''ತೊಕ್ಕೊಟ್ಟು ಪರಿಸರದಲ್ಲಿ ಮಾಂಸ ವ್ಯಾಪಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪರವಾನಿಗೆ ಕೂಡಾ ನೀಡಿದೆ. ವ್ಯಾಪಾರಿಗಳು ಟೆಂಟ್ ಹಾಕಿ ಮಾಂಸ ವ್ಯಾಪಾರ ಮಾಡುತ್ತಿದ್ದರು. ಈ ಟೆಂಟ್ ಗೆ ಶುಕ್ರವಾರ ತಡರಾತ್ರಿ 3 ಗಂಟೆಯ ಸುಮಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ಇದಕ್ಕೆ ನಾವು ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ''.
- ಅಯ್ಯೂಬ್ ಮಂಚಿಲ, ಉಪಾಧ್ಯಕ್ಷ, ಉಳ್ಳಾಲ ನಗರ ಸಭೆ
''ತೊಕ್ಕೊಟ್ಟುವಿನಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದ ಟೆಂಟ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಖಂಡನೀಯ. ವ್ಯಾಪಾರಕ್ಕೆ ಪರವಾನಿಗೆ ನೀಡಲಾಗಿದೆ. ಇದೇ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಇದೆ. ಅದಕ್ಕೆ ವ್ಯವಸ್ಥೆ ಕೂಡ ಮಾಡಿ ಕೊಡಲಾಗುವುದು''.
- ಚಂದ್ರ ಕಲಾ, ಅಧ್ಯಕ್ಷ ರು, ಉಳ್ಳಾಲ ನಗರ ಸಭೆ