ಮಂಗಳೂರು: ‘ಸಾವಯವ ಮಾರುಕಟ್ಟೆ’ಗೆ ಚಾಲನೆ
ಮಂಗಳೂರು, ಜ.17: ನಗರದ ಕೊಡಿಯಾಲಬೈಲ್ ಯೆನೆಪೊಯ ಆಸ್ಪತ್ರೆ ಬಳಿ ಶ್ರೀದುರ್ಗಾ ಸಾವಯವ ಮಳಿಗೆ ವಠಾರದಲ್ಲಿ ‘ಸಾವಯವ ಮಾರುಕಟ್ಟೆ’ಗೆ ರವಿವಾರ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸಾವಯವ ಕೃಷಿ ಉತ್ಪನ್ನಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಸಾವಯವ ಕೃಷಿ ಉತ್ಪನ್ನಗಳ ರಖಂ ಮತ್ತು ಚಿಲ್ಲರೆ ಮಾರಾಟಕ್ಕೆ ಇದು ಉತ್ತಮ ಅವಕಾಶವಾಗಿದೆ. ಸಾವಯವ ಮಾರ್ಕೆಟ್ ನಗರದಾದ್ಯಂತ ವಿಸ್ತರಿಸಲಿ ಎಂದು ಹೇಳಿದರು.
ವಿದೇಶಿ ಮಾದರಿಯ ಸಾವಯವ ತರಕಾರಿ !
ಈ ಆರ್ಗಾನಿಕ್ ಮಾರ್ಕೆಟ್ನಲ್ಲಿ ವಿದೇಶಿ ಮಾದರಿಯ ವಿವಿಧ ಸಾವಯವ ಕೃಷಿ ಉತ್ಪನ್ನಗಳು ಲಭ್ಯವಿರುವುದು ವಿಶೇಷ. ವಿದೇಶಗಳಲ್ಲಿ ಬೆಳೆಸುವ ತರಕಾರಿಗಳನ್ನು ಅದೇ ರೀತಿ ಇಲ್ಲಿ ರಾಸಾಯನಿಕ ಬಳಸದೆ ಬೆಳೆಸಿರುವುದನ್ನು ಮಾರಾಟ ಮಾಡಲಾಗುತ್ತಿದೆ. ಅಮೆರಿಕಾ, ಚೀನಾ, ಫ್ರಾನ್ಸ್, ಜಪಾನ್ ಹೀಗೆ ವಿವಿಧ ದೇಶಗಳ ಬಗೆಬಗೆಯ ಕೃಷಿ ಉತ್ಪನ್ನಗಳು ಇಲ್ಲಿ ಸಿಗುತ್ತದೆ. ಮುಖ್ಯವಾಗಿ ಚೆರ್ರಿ ಟೊಮೆಟೊ, ರೆಡ್ ಕ್ಯಾಬೇಜ್, ಐಸ್ ಬರ್ಗ್ ಕ್ಯಾಬೇಜ್, ವಿಶೇಷ ಬಗೆಯ ಪೆಪ್ಸಿಕಾಂ, ಹೊಕೂಸು, ಫ್ರೆಂಚ್ ಸೌತೆಕಾಯಿ ಸೇರಿದಂತೆ ಸುಮಾರು 130ಕ್ಕೂ ಅಧಿಕ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭ್ಯವಿರುತ್ತದೆ. ಪ್ರತಿ ರವಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಆರ್ಗಾನಿಕ್ ಮಾರ್ಕೆಟ್ ಕಾರ್ಯನಿರ್ವಹಿಸುತ್ತದೆ ಎಂದು ಸಂಘಟಕ ಕೇಶವ ಬಂಗೇರ ತಿಳಿಸಿದ್ದಾರೆ.