ಯುನಿವೆಫ್ ಕರ್ನಾಟಕ : ಬಜ್ಪೆಯಲ್ಲಿ ಸೀರತ್ ಸಮಾವೇಶ
ಮಂಗಳೂರು : "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಯುನಿವೆಫ್ ಕರ್ನಾಟಕ" ದ ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಬಜ್ಪೆ ಶಾಖೆ ವತಿಯಿಂದ ಇತ್ತೀಚೆಗೆ ಸೀರತ್ ಸಮಾವೇಶ ನಡೆಯಿತು.
"ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ(ಸ)" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, "ಭಾರತಕ್ಕೆ ಬಂದ ಇಸ್ಲಾಮ್ ಪ್ರಚಾರಕರು ಮತ್ತು ಆಮೇಲೆ ಭಾರತವನ್ನು ಆಳಿದ ಮುಸ್ಲಿಮ್ ರಾಜರುಗಳು ಈ ದೇಶಕ್ಕೆ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಆಧುನಿಕ ರಾಜಕೀಯ ಶಾಸ್ತ್ರದಲ್ಲೂ ಇಸ್ಲಾಮಿನ ಪ್ರಭಾವ ಎದ್ದು ಕಾಣುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ, ಆರ್ಥಿಕ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇಸ್ಲಾಮ್ ವ್ಯವಸ್ಥೆಯ ಪ್ರಭಾವ ಇರುವುದನ್ನೂ ನಾವು ಕಾಣುತ್ತಿದ್ದೇವೆ. ಇಷ್ಟೆಲ್ಲಾ ಕೊಡುಗೆಗಳನ್ನು ನೀಡಿದ ಒಂದು ಸಮುದಾಯ ಇಂದು ಯಾವುದೇ ಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿಲ್ಲ. ಈ ಸ್ಥಿತಿಯಿಂದ ಹೊರಬಂದು ಸಮುದಾಯವನ್ನು ಎಲ್ಲಾ ರಂಗಗಳಲ್ಲಿಯೂ ಶಕ್ತಗೊಳಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಯುನಿವೆಫ್ ಕರ್ನಾಟಕ ಶ್ರಮಿಸುತ್ತಿದೆ" ಎಂದು ಹೇಳಿದರು.
ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ತಾರ್ ಅಹ್ಮದ್ ಕಿರ್ ಅತ್ ಪಠಿಸಿದರು. ಜಿಲ್ಲಾಧ್ಯಕ್ಷ ನೌಫಲ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಹಸಂಚಾಲಕ ಅತೀಖುರ್ರಹ್ಮಾನ್ ಹಾಗೂ ಬಜ್ಪೆ ಶಾಖಾಧ್ಯಕ್ಷ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.