ಬ್ರಹ್ಮಾವರ: ಉಚಿತ ದಂತ ತಪಾಸಣೆ, ಚಿಕಿತ್ಸಾ ಶಿಬಿರ
ಉಡುಪಿ, ಜ. 22: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಎನ್ಓಹೆಚ್ಪಿ ಹಾಗೂ ದಂತಭಾಗ್ಯ ಯೋಜನೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಬಿ.ಸು.ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಬಾಯಿ ಆರೋಗ್ಯ ಪಾಲಿಸಿ ಕಾರ್ಯಕ್ರಮದಡಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸುತ್ತಿದ್ದು, ದಂತ ಚಿಕಿತ್ಸೆ, ವಸಡು ಆರೋಗ್ಯ ಚಿಕಿತ್ಸೆ, ಮಕ್ಕಳ ದಂತ ಚಿಕಿತ್ಸೆ, ಗರ್ಭಿಣಿಯರ ದಂತ ಆರೋಗ್ಯ, ಬಾಯಿ ಕ್ಯಾನ್ಸರ್ ತಪಾಸಣೆ, ಕೃತಕ ದಂತ ಪಂಕ್ತಿ ಜೋಡಣೆ ಮತ್ತು ಇತರೆ ದಂತಪಂಕ್ತಿ ಸಮಸ್ಯೆಗಳಿಗೆ ರಿಹಾರ ನೀಡಲಾಗುವುದು ಎಂದರು.
ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ದಂತ ಆರೋಗ್ಯ ಮತ್ತು ಕೋವಿಡ್-19 ಕುರಿತು ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಡಾ. ಆರತಿ ಕುಲಕರ್ಣಿ ಶಿಬಿರದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಶಿಬಿರದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಜಿಲ್ಲಾ ಆಸ್ಪತ್ರೆಯ ದಂತ ವೈದ್ಯೆ ಡಾ. ಚೈತ್ರ ಉಪಸ್ಥಿತರಿದ್ದು, ಉಚಿತವಾಗಿ ದಂತ ತಪಾಸಣೆ ಹಾಗೂ ಚಿಕಿತ್ಸೆ ನೀಡಿದರು. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಎನ್ಸಿಡಿ ಘಟಕದ ಆಪ್ತ ಸಾಲೋಚಕಿ ಮಮತಾ ನಿರೂಪಿಸಿದರು.