ಬಾವಿಯಲ್ಲಿ ಯುವತಿಯ ಮೃತದೇಹ ಪತ್ತೆ : ಆತ್ಮಹತ್ಯೆ ಶಂಕೆ
ಪಡುಬಿದ್ರಿ : ಯುವತಿಯೋರ್ವಳ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಪಡುಬಿದ್ರಿ ನಡ್ಸಾಲು ನಿವಾಸಿ ನಿಕಿತಾ (23) ಅವರ ಮೃತದೇಹ ಅದಮಾರು ತೆಂಕರಗುತ್ತು ಮನೆ ಸಮೀಪವಿರುವ ತೋಟದ ಬಾವಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಇತ್ತೀಚೆಗಷ್ಟೇ ಎಂಕಾಂ ವ್ಯಾಸಂಗ ಪೂರ್ಣಗೊಳಿಸಿದ್ದ ಯುವತಿ, ಪಿಯುಸಿ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ತಂದೆ ಎರ್ಮಾಳಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಸಹೋದರ ಹಾಗೂ ತಾಯಿಯೊಂದಿಗೆ ನಡ್ಸಾಲಿನ ಮನೆಯಲ್ಲಿ ವಾಸವಾಗಿದ್ದರು. 22 ರಂದು ಅದಮಾರು ತೆಂಕರಗುತ್ತು ಬಳಿಯ ಅಜ್ಜಿ ಮನೆಗೆ ತೆರಳಿದ್ದರು. ಸೋಮವಾರ ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಹೋದಾಕೆ ಮತ್ತೆ ವಾಪಾಸು ಬರದಿದ್ದಾಗ ಮನೆಯವರೆಲ್ಲ ಸೇರಿ ಹುಡುಕಾಡುತ್ತಿದ್ದಾಗ ಮನೆಯ ಸಮೀಪದ ಆವರಣವಿಲ್ಲದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ನಿಕಿತಾ ಕೆಲಸ ವಿಲ್ಲದ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.