ಬಂಟಕಲ್ಲು: ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಆಳವಡಿಕೆ
ಶಿರ್ವ, ಫೆ.2: ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ವತಿಯಿಂದ ಬಂಟಕಲ್ಲು ಪೇಟೆಯ ಆಯಕಟ್ಟಿನ ಜಾಗದಲ್ಲಿ ಅಳವಡಿಸಿದ ಮೂರು ಸಿಸಿ ಕ್ಯಾಮರಾಗಳಿಗೆ ಶಿರ್ವ ಪೋಲಿಸ್ ಠಾಣಾಧಿಕಾರಿ ಶ್ರೀಶೈಲ ಸೋಮವಾರ ಚಾಲನೆ ನೀಡಿದರು.
ಪೂರ್ವಭಾವಿಯಾಗಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಶಿರ್ವ ಆರಕ್ಷಕ ಠಾಣೆ, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಮತ್ತು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಬಾಗಿತ್ವದಲ್ಲಿ ಕಾಲೇಜಿನಿಂದ ಬಂಟಕಲ್ಲು ಪೇಟೆಯವರೆಗೆ ಜಾಗೃತಿ ಜಾಥಾ, ರಸ್ತೆ ಸುರಕ್ಷಾ ನಿಯಮಗಳ ಕರಪತ್ರ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಯಿತು.
ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸ ಬೇಕು. ಹೆಲ್ಮೆಟ್ ಧರಿಸುವುದು ಅಗತ್ಯ. ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆಯಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಶಿರ್ವ ಠಾಣಾಧಿಕಾರಿ ಶ್ರೀಶೈಲ ತಿಳಿಸಿದರು.
ಅಧ್ಯಕ್ಷತೆಯನ್ನು ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿದ್ದರು. ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೊಟ್ಯಾನ್, ಬಂಟಕಲ್ಲು ತಾಂತ್ರಿಕ ಕಾಲೇಜಿನ ಎನ್ಎಸ್ಎಸ್ ನಿರ್ದೇಶಕ ಪ್ರೊ.ಗಣೇಶ ಶೆಟ್ಟಿ, ಪ್ರೊ.ಮಧುಕರ್, ಬಂಟಕಲ್ಲು ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಸತೀಶ್, ಕಾರು ಚಾಲಕ/ಮಾಲಕರ ಸಂಘದ ಅಧ್ಯಕ್ಷ ಉಮೇಶ ರಾವ್, ನಾಗರಿಕ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕೋಶಾಧಿಕಾರಿ ಜಗದೀಶ ಆಚಾರ್ಯ, ಹರೀಶ್ ಹೇರೂರು, ವೀರೇಂದ್ರ ಪಾಟ್ಕರ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ದಿನೇಶ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.