ಪರ್ಕಳ ಕಾಂಗ್ರೆಸ್ ಕಚೇರಿಗೆ ಸಿದ್ದರಾಮಯ್ಯ ಭೇಟಿ
ಉಡುಪಿ, ಫೆ.22: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಮಾನಿಗಳ ಕೊರಿಕೆಯಂತೆ ಪರ್ಕಳದ ಸ್ವಾಗತ್ ಹೋಟೆಲ್ ಸಮೀಪದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಗೆ ಶುಭಹಾರೈಸಿದರು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಪ್ರಾರ್ಥಿಸಿ 108 ತೆಂಗಿನ ಕಾಯಿಗಳನ್ನು ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಒಡೆದು ಪ್ರಾರ್ಥಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಮನವಿಯಂತೆ ಸಿದ್ದರಾಮಯ್ಯ ಕಾರ್ಯಕರ್ತರನ್ನು ಭೇಟಿಯಾದರು ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ರಾಜ್ ಸರಳೇಬೆಟ್ಟು ತಿಳಿಸಿದರು.
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಶಾಸಕ ಯು.ಟಿ.ಖಾದರ್ ಮತ್ತು ಕವಿತಾ ಸನಿಲ್, ಮೊಯ್ದಿನ್ ಬಾವ, ಸ್ಥಳೀಯ ಮುಖಂಡರಾದ ಮೋಹನ್ದಾಸ್ ನಾಯಕ್ ಪರ್ಕಳ, ಜಯಶೆಟ್ಟಿ ಬನ್ನಂಜೆ, ಎ.ಪಿ.ರಾವ್, ಬಿ.ಜಯರಾಂ ಪರ್ಕಳ, ಸುಕೇಶ್ ಕುಂದರ್ ಹೆರ್ಗಾ, ಸದಾ ನಂದ ಪೂಜಾರಿ, ಉಪೇಂದ್ರ ನಾಯ್ಕ್, ತುಳಜಾ ಪರ್ಕಳ ಗಣೇಶ್ ಶೆಟ್ಟಿ ಕೀಳಂಜೆ, ದೇವೇಂದ್ರ ನಾಯಕ್, ವಾಲ್ಟರ್ ಡಿಸೋಜಾ ಕೊಳಲಗಿರಿ, ದೇವಿಪ್ರಸಾದ್, ಆಚಾರ್ಯ, ದೇವೇಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಅನ್ನಭಾಗ್ಯ ಯೋಜನೆಯ ಸರಕಾರಿ ಮಟ್ಟದ ಲಾಂಛನದಲ್ಲಿ ಪ್ರಚುರಪಡಿಸಿದ ನಿಜವಾದ ಫಲಾನುಭವಿಯಾದ ಸ್ಥಳೀಯ ಲಲಿತಾ ಪ್ರಭು ಪರ್ಕಳ ಅವರನ್ನು ಸಿದ್ದರಾಮಯ್ಯ ಇದೇ ವೇಳೆ ಭೇಟಿ ಮಾಡಿ ವಿಚಾರಿಸಿದರು. ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ಪರ್ಕಳದಲ್ಲಿರುವ ವೈದ್ಯರೊಬ್ಬರ ಗೃಹಪ್ರವೇಶ ಕಾರ್ಯ ಕ್ರಮಕ್ಕೆ ತೆರಳಿದರು.