ಹೂಡೆ ಸಾಲಿಹಾತ್ ಕಾಲೇಜಿನಲ್ಲಿ ವಿವಾಹ ಪೂರ್ವ ಸಮಾಲೋಚನಾ ಕಾರ್ಯಾಗಾರ
ಉಡುಪಿ, ಫೆ.24: ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ಘಟಕ ಹೂಡೆಯ ಆಶ್ರಯದಲ್ಲಿ ಸಧೃಡ ಕುಟುಂಬ ಸುಭದ್ರ ಸಮಾಜ ಎಂಬ ಅಭಿಯಾನದ ಪ್ರಯುಕ್ತ ಹೂಡೆ ಸಾಲಿಹಾತ್ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ವಿವಾಹಪೂರ್ವ ಸಮಾಲೋಚನಾ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರಾಜ್ಯ ಜಮಾಅತೆ ಇಸ್ಲಾಂ ಮಹಿಳಾ ಘಟಕದ ಸಹ ಕಾರ್ಯದರ್ಶಿ ತಷ್ಕಿಲಾ ಖಾನಮ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಯು ಇಂದಿನ ಜೀವನ ಶೈಲಿಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕುಟುಂಬ ಸಂಬಂಧಗಳನ್ನು ಉತ್ತಮ ಪಡಿಸಲು ಶಾಲಾ ಕಾಲೇಜು ಹಂತದಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ, ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ಪ್ರಯತ್ನಿಸ ಬೇಕು ಎಂದು ಹೇಳಿದರು.
ಹೂಡೆಯ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಸ್ಥಳೀಯ ಗ್ರಾಪಂ ಸದಸ್ಯೆ ಜಮೀಲಾ ಇಸಾಕ್, ಸಾಲಿಹಾತ್ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಶಬೀನಾ, ಪದವಿ ಪೂರ್ವ ಕಾಲೇಜು ವಿಭಾಗದ ಉಪಪ್ರಾಂಶುಪಾಲೆ ಮುಮ್ತಾಝ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಸಾಲಿಹಾತ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂಬಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕಿ ಸುರಯ್ಯ ಮುನೀರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.