ಸಹ್ಯಾದ್ರಿ ಕಾಲೇಜಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್ ಇಂಡಸ್ಟ್ರೀಸ್ ಹಬ್ ಉದ್ಘಾಟನೆ
ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯಕ್ರಮ ಸಹಿತ ಅಮೂಲಾಗ್ರ ಸುಧಾರಣೆ ತಂದು ಈ ಮೂಲಕ ಎಲ್ಲ ಸ್ಟಾರ್ಟ್ಅಫ್ಗೆ 50 ಕೋ.ರೂ. ನೀಡಲು ಈ ವರ್ಷದಿಂದಲೇ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಸಿ.ಎನ್. ಹೇಳಿದರು.
ನಗರದ ಹೊರವಲಯದ ಅಡ್ಯಾರ್ನಲ್ಲಿರುವ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಬುಧವಾರ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡಿಜಿಟಲ್ ಫಾರೆನ್ಸಿಕ್ ಇಂಟೆಲಿಜೆನ್ಸ್ ಆ್ಯಂಡ್ ಸೈಬರ್ ಸೆಕ್ಯುರಿಟಿ ಮತ್ತು ಇಂಡಸ್ಟ್ರೀಸ್ ಹಬ್ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾ ಸಂಸ್ಥೆಗಳು ದೇವಾಲಯಕ್ಕೆ ಸಮಾನ. ವಿದ್ಯಾ ಸಂಸ್ಥೆಗಳ ಮೇಲೆ ಶ್ರದ್ಧೆ, ಭಕ್ತಿ, ಗೌರವ ಬೆಳೆಸಿಕೊಂಡಾಗ ಸಂಸ್ಥೆಯ ಜತೆ ನಾವು ಕೂಡಾ ವೈಯುಕ್ತಿಕವಾಗಿ ಬೆಳೆಯಲು ಸಾಧ್ಯವಿದೆ. ಗುಣಮಟ್ಟದ ಜೀವನಕ್ಕೆ ಶಿಕ್ಷಣ ಅವಶ್ಯ. ಉತ್ತಮ ಶಿಕ್ಷಣ ಪಡೆದುಕೊಂಡಾಗ ಸಮಾಜದಲ್ಲಿ ಎದುರಾ ಗುವ ಎಲ್ಲ ಸಮಸ್ಯೆ ಎದುರಿಸಲು ಸಾಧ್ಯವಿದೆ ಎಂದರು.
ಪ್ರಪಂಚವನ್ನೇ ಬದಲಾವಣೆ ಮಾಡುವಷ್ಟು ಪ್ರತಿಭೆ ಕರ್ನಾಟಕದಲ್ಲಿದೆ. ಪ್ರತಿ ವರ್ಷ 8 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಪ್ರತಿ ವರ್ಷ ಒಟ್ಟು 5 ಲಕ್ಷ ಪದವೀಧರರು ಹೊರ ಬರುತ್ತಿದ್ದಾರೆ. ಅಂದರೆ ಉದ್ಯೋಗ ಸೃಷ್ಟಿಯ ಪ್ರಮಾಣ ಹೆಚ್ಚಿದೆ ಎಂದು ಡಾ.ಅಶ್ವಥನಾರಾಯಣ ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಅವರು ಎನ್ಎಐಎನ್, ಕೆ-ಟೆಕ್ ಸೆಂಟರ್ನ ಹೊಸ ಕಾರ್ಯಾಲಯ ಉದ್ಘಾಟಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ರೋಬಾಟಿಕ್ ವೆಲ್ಡಿಂಗ್ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಶೀನ್ ಲರ್ನಿಂಗ್ ಉದ್ಘಾಟಿಸಿದರು.
ಸರ್ಕಾರದ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಹಾ ಪ್ರಬಂಧಕಿ ಚಂಪಾ ಇ ಹಾಗೂ ಸಹ್ಯಾದ್ರಿ ಕಾಲೇಜ್ನ ಪ್ರಾಂಶುಪಾಲ ಡಾ.ರಾಜೇಶ್ ಎಸ್. ಉಪಸ್ಥಿತರಿದ್ದರು.
ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಸ್ವಾಗತಿಸಿದರು. ಕಾಲೇಜಿನ ವತಿಯಿಂದ ಡಾ.ಅಶ್ವಥನಾರಾಯಣ ಅವರನ್ನು ಸನ್ಮಾನಿ ಸಲಾಯಿತು. ನೀತಿ ಆಯೋಗದ ಸದಸ್ಯ ಉದಯ್ ಬಿರ್ಜಿ, ಅಲಹಾಬಾದ್ ಐಐಐಟಿಯ ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.