ಕಾಜೂರು ಉರೂಸ್ ಪ್ರಯುಕ್ತ ಜನಪ್ರತಿನಿಧಿ ಸಂಗಮ: ಸಾಧಕರಿಗೆ ಸನ್ಮಾನ
ಬೆಳ್ತಂಗಡಿ : ಕಾಜೂರು ಉರೂಸ್ ಪ್ರಯುಕ್ತ ಬುಧವಾರ ಕಾಜೂರಿನಲ್ಲಿ ಸ್ಥಳೀಯ ಮಟ್ಟದ ಎಲ್ಲಾ ಜನಪ್ರತಿನಿಧಿಗಳ ಸೌಹಾರ್ದ ಸಂಗಮ ಮತ್ತು ಸಾರ್ಥಕ ಸೇವೆ ಗೈದವರಿಗೆ ಸನ್ಮಾನ ಸಮಾರಂಭ ನಡೆಯಿತು.
ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದು, ಕ್ಷೇತ್ರಕ್ಕೆ ವಿಶೇಷ ಅನುದಾನಕ್ಕಾಗಿ ಶಾಸಕ ಹರೀಶ್ ಪೂಂಜ ಅವರು ನಮಗೆ ಸಹಕಾರ ನೀಡಿದ್ದಾರೆ. ನಮ್ಮ ಆಸುಪಾಸಿನ ಎಲ್ಲ ಪಂಚಾಯತ್ ಸದಸ್ಯರು ಗಳೂ ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಮ್ಮ ಜೊತೆ ಸಹಕರಿಸಬೇಕು ಎಂದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಪತ್ರಕರ್ತ ಅಶ್ರಫ್ ಆಲಿಕುಂಞಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಶಾಶ್ವತ ತಾಣಗಳು. ಇಲ್ಲಿಂದ ಸೌಹಾರ್ದತೆಯ ಸಂದೇಶ ರವಾನೆಯಾದರೆ ಅದು ಪರಿಣಾಮಕಾರಿಯಾಗಿರುತ್ತದೆ ಎಂದರು. ಸಭೆಯಲ್ಲಿ ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮತ್ತು ಇಂದಬೆಟ್ಟು ಗ್ರಾ.ಪಂ ಮಟ್ಟದ ಎಲ್ಲಾ ಸದಸ್ಯರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಗೌರವ ಸ್ವೀಕರಿಸಿ ಇಂದಬೆಟ್ಟು ಗ್ರಾ.ಪಂ ಅಧ್ಯಕ್ಷ ಆನಂದ ಹಡೀಲು, ಕಡಿರುದ್ಯಾವರ ಗ್ರಾ.ಪಂ ಅಧ್ಯಕ್ಷ ಅಶೋಕ್ ಕುಮಾರ್, ಮಿತ್ತಬಾಗಿಲು ಗ್ರಾ.ಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ವಿನಯಚಂದ್ರ ಸೇನೆರೊಟ್ಟು, ಮಾಜಿ ಅಧ್ಯಕ್ಷ ಪಾಟಾಳಿ ಮಾತನಾಡಿದರು.
ವೇದಿಕೆಯಲ್ಲಿ ಮಲವಂತಿಗೆ ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಡಿ ದಿನೇಶ್ ಗೌಡ, ತುಂಗಪ್ಪ ಪೂಜಾರಿ ಕಾಜೂರು, ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ನಾಯ್ಕ, ಇತ್ತೀಚೆಗೆ ಸೇನೆಯಿಂದ ನಿವೃತ್ತರಾದ ಯತೀಂದ್ರ ಹೆಚ್.ಜಿ ಕಡಿರುದ್ಯಾವರ, ಮೆಸ್ಕಾಂ ಇಲಾಖೆಯ ಪವರ್ಮೇನ್ ರಮೇಶ್ ಗೌಡ, ಮಲವಂತಿಗೆ ವಿಭಾಗದ ಅರಣ್ಯ ರಕ್ಷಕ ರಾಜು ಜಿ.ಎನ್ ಮತ್ತು ಅಂಚೆ ಇಲಾಖೆಯ ರಮೇಶ್ ಭಟ್ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಕೆ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಜೆ.ಎಚ್ ಅಬೂಬಕರ್ ಸಿದ್ದೀಕ್ , ಕೋಶಾಧಿಕಾರಿ ಕೆ.ಯು ಕಮಾಲ್, ಸದಸ್ಯರಾದ ಎಂ. ಅಬೂಬಕ್ಕರ್ ಮಲ್ಲಿಗೆಮನೆ, ಬಿ.ಹೆಚ್ ಅಬ್ದುಲ್ ಹಮೀದ್, ಬದ್ರುದ್ದೀನ್ ಕಾಜೂರು, ಕೆ.ಎಚ್ ಸಿದ್ದೀಕ್, ಕೃಷಿಕರಾದ ಮೋಹನ್ ಗೌಡ ಬೆಡಿಗುತ್ತು, ತುಂಗಪ್ಪ ಪೂಜಾರಿ, ಆನಂದ ಮೈರ್ನೋಡಿ ಇವರು ಉಪಸ್ಥಿತರಿದ್ದರು.
ಉರೂಸ್ ಸಮಿತಿ ಜೊತೆ ಕಾರ್ಯದರ್ಶಿ ಎಂ.ಎ ಖಾಸಿಂ ಮಲ್ಲಿಗೆಮನೆ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕುಂತೂರು ನಿರೂಪಿಸಿದರು.