ಫೆ.28: ಲಯನ್ಸ್ ಜಿಲ್ಲೆ 318ರ ಪ್ರಾಂತೀಯ ಸಮ್ಮೇಳನ
ಮಂಗಳೂರು, ಫೆ.27: ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 7ರ ಪ್ರಾಂತೀಯ ಸಮ್ಮೇಳನವು ಫೆ.28ರಂದು ಸಂಜೆ ನಗರದ ಸುಲ್ತಾನ್ ಬತ್ತೇರಿಯ ಸೆಸ್ಮಾ ರಿವರ್ ವ್ಯೆವ್ನಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ನ ಪ್ರಾಂತ್ಯಾಧ್ಯಕ್ಷೆ ಗೀತಾ ರತ್ನಾಕರ ಶೆಟ್ಟಿ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಮ್ಮೇಳನದಲ್ಲಿ ಸುಮಾರು 500 ಮಂದಿ ಲಯನ್ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅತಿಥಿಗಳಾಗಿ ಕಾಮಿಡಿ ಆರ್ಟಿಸ್ಟ್ ಕವಿತಾ ಸುಧೀಂದ್ರ ಹಾಗೂ ಗೌರವಾಧ್ಯಕ್ಷ ಕುಸುಮಾಧರ ಡಿ. ಶೆಟ್ಟಿ ಭಾಗವಹಿಸಲಿದ್ದಾರೆ. ಲಯನ್ ಸಂಪುಟ ಸಂಯೋಜಕ ಡಾ. ರತ್ನಾಕರ ಶೆಟ್ಟಿ ಸಮ್ಮೇಳನ ಉದ್ಘಾಟಿಸುವರು ಎಂದರು.
ಲಯನ್ಸ್ ಕ್ಲಬ್ 8 ವರ್ಷದ ಹಿಂದೆ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದಲ್ಲಿ ಅನಾಥ ಮಹಿಳೆಯರಿಗೆ ‘ಸೇವಾಂಜಲಿ’ ಸ್ಥಾಪಿಸಿದೆ. 60 ವರ್ಷ ಮೇಲ್ಪಟ್ಟ ಸುಮಾರು 30 ಮಹಿಳೆಯರು ಇಲ್ಲಿದ್ದಾರೆ. ಇನ್ನೂ 30 ಮಂದಿ ಅನಾಥ ಮಹಿಳೆಯರು ಆಶ್ರಯ ಪಡೆಯಲು ಅವಕಾಶವಿದೆ. ಮಾಸಿಕ 80 ಸಾವಿರ ಖರ್ಚು ತಗಲುತ್ತಿದ್ದು, ಟ್ರಸ್ಟಿಗಳೇ ಅದನ್ನು ಭರಿಸುತ್ತಿದ್ದಾರೆ. ಇದೀಗ ಸಮೀಪದಲ್ಲೇ ಪುರುಷ ಅನಾಥರಿಗೂ ಆಶ್ರಮ ಸ್ಥಾಪಿಸುವ ಉದ್ದೇಶವಿದ್ದು, ಈ ಸಮ್ಮೇಳನದಲ್ಲಿ ಇದಕ್ಕೆ ಭೂಮಿಕೆ ಸಿದ್ಧಪಡಿಸಲಾಗುವುದು ಎಂದು ಗೀತಾ ರತ್ನಾಕರ ಶೆಟ್ಟಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ರತ್ನಾಕರ ಶೆಟ್ಟಿ, ವಾಣಿ ವಿ. ಆಳ್ವ, ಹರೀಶ್ ಆಳ್ವ, ಅನುರಾಧಾ ಶರತ್ ಉಪಸ್ಥಿತರಿದ್ದರು.