ಮಾ.12ರಿಂದ ತೋಡಾರು ಉರೂಸ್
ಮೂಡುಬಿದಿರೆ: ಮಾ. 12ರಿಂದ 21ರವರೆಗೆ ತೋಡಾರು ಉರೂಸ್ ಸಮಾರಂಭ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಡಿ.ಎ ಉಸ್ಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಸೀದಿಯ ಮದರ್ರಿಸ್ ಖಾಸಿಂ ದಾರಿಮಿ ಅಧ್ಯಕ್ಷತೆಯಲ್ಲಿ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸ್ವಲಾತ್ ವಾರ್ಷಿಕ ನೇತೃತ್ವವನ್ನು ವಹಿಸಲಿದ್ದಾರೆ. ಅಸ್ಲಂ ಅಝ್ಹರಿ ಪೊಯ್ದುಂಕಡವು ಭಾಷಷಣಗಾರರಾಗಿ ಭಾಗವಹಿಸಲಿದ್ದಾರೆ. ಮಾ. 18ರಂದು ರಾತ್ರಿ ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಲಿದೆ. ಮಾ. 19ರಂದು ಸಂದಲ್ ಮೆರವಣಿಗೆ ನಡೆಯಲಿದೆ. 21ರಂದು ಸಂಜೆ 5 ಗಂಟೆಗೆ ನಡೆಯುವ ಸ್ನೇಹ ಸಂಗಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬಳಿಕ ದ.ಕ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಾಫಿಲ್ ಸಿರಾಜುದ್ದೀನ್ ಅಲ್ಖಾಸಿಮಿ ಪತ್ತನಾಪುರಂ, ಕೇರಳ ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು. ತೋಡಾರು ಮಸೀದಿಗೆ 200 ವರ್ಷಗಳ ಇತಿಹಾಸವಿದ್ದು ಸಯ್ಯದ್ ವಲಿಯುಲ್ಲಾಹಿ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಈ ವರ್ಷ ಐವತ್ತು ವರ್ಷ ತುಂಬಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಎಂ.ಜಿ ಮಹ್ಮದ್ ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸೂಫ್ ಮಿಜಾರು, ಉಪಾಧ್ಯಕ್ಷರಾದ ಇದಿನಬ್ಬ, ಜತೆ ಕಾರ್ಯದರ್ಶಿ ಹಾಸಿರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.