ಮಣಿಪಾಲ: ಮಾ.20ರಿಂದ ಕೊಂಕಣಿ ಸಾಹಿತ್ಯ ಸಮ್ಮೇಳನ
ಉಡುಪಿ, ಮಾ. 4: ಕರ್ನಾಟಕ ಕೊಂಕಣಇ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಉಡುಪಿಯ ಸಮಾನ ಮನಸ್ಕರು ರಚಿಸಿದ ಸಂಘಟನಾ ಸಮಿತಿಯ ಉಸ್ತುವಾರಿಯಲ್ಲಿ ಮಣಿಪಾಲದಲ್ಲಿರುವ ಜಿಎಸ್ಬಿ ಸಭಾಭವನದಲ್ಲಿ ಮಾ.20 ಮತ್ತು 21ರಂದು ಎರಡು ದಿನಗಳ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಂಘಟನಾ ಸಮಿತಿಯ ಗಣೇಶ್ ಪ್ರಸಾದ್ ಜಿ.ನಾಯಕ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಪೂರ್ವಭಾವಿ ಸಭೆಗಳು, ಸಿದ್ಧತೆಗಳು ಭರದಿಂದ ನಡೆದಿದ್ದು, ಸಂಘಟನಾ ಸಮಿತಿಯ ಗೌರವಾದ್ಯಕ್ಷರಾಗಿ ಗೋಕುಲದಾಸ ನಾಯಕ್, ಅಧ್ಯಕ್ಷರಾಗಿ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ ಪೈ, ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ ಶೆಣೈ ಕಾರ್ಯನಿರ್ವಹಿಸುತಿದ್ದಾರೆ ಎಂದರು.
ಮಾ.20ರಂದು ಅಪರಾಹ್ನ 3 ಗಂಟೆಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ನಿಂದ ಕೊಂಕಣಿ ಶೋಭಾ ಯಾತ್ರೆ ನಡೆಯಲಿದ್ದು ಮಣಿಪಾಲದ ಅಶೋಕ್ ಟಿ.ಪೈ ಉದ್ಘಾಟಿಸಲಿದ್ದಾರೆ. ಸಂಜೆ 6 ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಸಮ್ಮೇಳನದಲ್ಲಿ ಕೊಂಕಣಿ ಭಾಷೆ ಮಾತನಾಡುವ ಸುಮಾರು 40 ಪಂಗಡಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಕನ್ನಡ-ಹಿಂದಿ ಚಲನಚಿತ್ರ ನಟ ಅನಂತನಾಗ್ ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಕೊಂಕಣಿಗರನ್ನು ಸನ್ಮಾನಿಸ ಲಾಗುವುದು. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿವಿಧ ಕವಿಗೋಷ್ಠಿ, ಕಥಾಗೋಷ್ಠಿ, ಸಂಗೀತ ಗೋಷ್ಠಿಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಮಲಾಕ್ಷ ಸೇಠ್, ವಸಂತ ನಾಯಕ್, ಗೀತಾ ರವಿಸೇಠ್, ರಾಘವೇಂದ್ರ ಕರ್ವಾಲೊ, ಜೋಸೆಫ್ ರೆಬೆಲ್ಲೊ ಉಪಸ್ಥಿತರಿದ್ದರು.