ರ್ಯಾಗಿಂಗ್ ಮತ್ತು ಕಾಲೇಜು ಉಪನ್ಯಾಸಕರಿಗೆ ಹಲ್ಲೆ ಆರೋಪ: ನಾಲ್ವರು ವಿದ್ಯಾರ್ಥಿಗಳ ಬಂಧನ
ಮಂಗಳೂರು, ಮಾ.5: ವಿದ್ಯಾರ್ಥಿಯ ರ್ಯಾಗಿಂಗ್ ಮತ್ತು ಕಾಲೇಜು ಉಪನ್ಯಾಸಕರಿಗೆ ಹಲ್ಲೆಗೈದ ಆರೋಪದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಆಯುಕ್ತ ಶಶಿಕುಮಾರ್ ಶುಕ್ರವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಅದೇ ಕಾಲೇಜಿನ ಮೂರನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮುಹಮ್ಮದ್ ಬಾಝಿಲ್, ಕೆಯು ಶಮೀಲ್, ಸಂಭ್ರಮ್ ಆಳ್ವಾ, ಅಶ್ವಿನ್ ಜಾನ್ಸನ್ ಎಂಬವರು ರ್ಯಾಗಿಂಗ್ ನಡೆಸಿದ್ದರು. ಈ ಬಗ್ಗೆ ನೊಂದ ವಿದ್ಯಾರ್ಥಿ ನೀಡಿದ್ದ ದೂರಿನಂತೆ ಕಾಲೇಜಿನ ಡೀನ್ ಆರೋಪಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದರು.
ಈ ಮಧ್ಯೆ ಆರೋಪಿತ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರೊಬ್ಬರಿಗೆ ಹಲ್ಲೆಗೈದು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಮತ್ತು ಉಪನ್ಯಾಸಕ ನೀಡಿದ ಎರಡು ಪ್ರತ್ಯೇಕ ದೂರನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.