ಹಳದಿ ರೋಗಕ್ಕೆ ಪರಿಹಾರ: ಮುಖ್ಯಮಂತ್ರಿಗೆ ಮನವಿ
ಉಡುಪಿ, ಮಾ.5: ಹಳದಿ ರೋಗದಿಂದ ಅಡಕೆ ತೋಟ ನಾಶ ಹೊಂದಿದವರಿಗೆ ಒಂದು ಬಾರಿ ಪರಿಹಾರವಾಗಿ 25 ಕೋಟಿ ರೂ. ಪ್ಯಾಕೇಜ್ನ್ನು ಬಜೆಟ್ನಲ್ಲಿ ಘೋಷಿಸಲು ಹಾಗೂ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆ ಕರಾವಳಿ ಭಾಗದ ಸಚಿವರು ಹಾಗು ಮಲೆನಾಡು ಮತ್ತು ಕರಾವಳಿಯ ಶಾಶಕರುಗಳು ತೋಟಗಾರಿಕಾ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ಈ ಸಂಬಂಧ ಮನವಿ ಸಲ್ಲಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಜೆಟ್ನಲ್ಲಿ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದರು.
ತೋಟಗಾರಿಕೆ ಸಚಿವ ಆರ್.ಶಂಕರ್, ಕರಾವಳಿಯ ಸಚಿವರಾದ ಎಸ್.ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು.
ಪ್ರಸ್ತುತ ಅಡಕೆಗೆ ಬೆಲೆ ಬಂದಿದೆ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹಳದಿ ರೋಗದಿಂದ ಅಡಕೆ ತೋಟಗಳು ಸರ್ವ ನಾಶವಾಗಿವೆ. ಅಡಕೆ ಬೆಳೆಗಾರರನ್ನು ರಕ್ಷಣೆ ಮಾಡುವ ಅವಶ್ಯಕತೆ ಇದೆ. ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಅಡಕೆಗೆ ಹಳದಿ ರೋಗದಿಂದ ಬಾಧಿತರಾದ ರೈತರಿಗೆ ಸಾಲ ಮನ್ನಾ ಮಾಡಬೇಕು. ಪರ್ಯಾಯ ಕೃಷಿ ಮಾಡುವವರಿಗೆ ದೀರ್ಘಾವಧಿ ಸಾಲ ಮಂಜೂರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ ನಾಯ್ಕ, ಕೆ.ಜಿ.ಬೋಪಯ್ಯ, ಅರಗ ಜ್ಞಾನೇಂದ್ರ ನಿಯೋಗದಲ್ಲಿದ್ದರು.