ಮಂಗಳೂರು : 'ತಫ್ಸೀರ್ ಇಬ್ನು ಕಸೀರ್' ಕನ್ನಡ ಭಾಷಾಂತರ ಬಿಡುಗಡೆ
ಮಂಗಳೂರು : ಶೈಖ್ ಸಫಿಯುರಹ್ಮಾನ್ ಮುಬಾರಕ್ʼಪುರಿ ಯವರಿಂದ ವಿರಚಿತವಾದ “ಅಲ್ ಮಿಸ್ಬಾಹುಲ್ ಮುನೀರ್ ಫೀ ತಹ್ʼಝೀಬಿ ತಫ್ಸೀರ್ ಇಬ್ನು ಕಸೀರ್” ಎಂಬ ಪವಿತ್ರ ಕುರ್ʼಆನ್ ವ್ಯಾಖ್ಯಾನ ಗ್ರಂಥದ ಭಾಗ-30ರ ಕನ್ನಡ ಅರ್ಥಾನುವಾದ ಗ್ರಂಥವು ದೇರಳಕಟ್ಟೆ ಜಂಕ್ಷನ್ನಲ್ಲಿ ರವಿವಾರ ಸಂಜೆ ನಡೆದ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಸಲಫಿ ಎಸೋಸಿಯೇಷನ್ ಮಂಗಳೂರು ಇದರ ವತಿಯಿಂದ ನಡೆದ ಸಭೆಯಲ್ಲಿ ಖ್ಯಾತ ವಿದ್ವಾಂಸರಾದ ಶೈಖ್ ಫೈಝುಲ್ಲಾಹ್ ಮದನಿ ಅವರು ಅನುವಾದ ಗ್ರಂಥವನ್ನು ಬಿಡುಗಡೆಗೊಳಿಸಿ ಉಪನ್ಯಾಸ ನೀಡಿದರು.
ಮೌಲವಿ ಮುಜಾಹಿದ್ ಬಾಲುಶ್ಶೇರಿ ಅವರು ಕುರ್ಆನಿನ ಅದ್ಭುತಗಳ ಬಗ್ಗೆ ಉಪನ್ಯಾಸ ನೀಡಿದರು.
ಮೌಲವಿ ಶಿಹಾಬ್ ಎಡಕ್ಕರ ಮಾತನಾಡುತ್ತಾ, ಯುವಕರು ಸರ್ವ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಬೇಕೆಂದು ಕರೆ ನೀಡಿದರು. ಮೌಲವಿ ಇಜಾಝ್ ಸ್ವಲಾಹಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು.
‘sheikfaizullahmadani’ ಎಂಬ ಇಸ್ಲಾಮಿಕ್ ಆಪ್ ಅನ್ನು ಬಿಡುಗಡೆಗೊಳಿಸಲಾಯಿತು. ಅಲ್ ಬಯಾನ್ ಅರೇಬಿಕ್ ಕಾಲೇಜಿನ ವಿದ್ಯಾರ್ಥಿ ಅಬ್ದುಲ್ ಅಝೀಮ್ ಸ್ವಾಗತ ಭಾಷಣ ಮಾಡಿ, ಖಲೀಲ್ ತಲಪಾಡಿ ವಂದಿಸಿದರು. ನಝೀರ್ ಸಲಫಿ, ಡಾ.ಹಫೀಝ್ ಸ್ವಲಾಹಿ, ಅಬ್ದುಲ್ ರಶೀದ್ ಇಂಜಿನಿಯರ್ ಮತ್ತು ಬಿ.ಎಲ್ ಅಹ್ಮದ್ ವೇದಿಕೆಯಲ್ಲಿದ್ದರು.
ಕುರ್ಆನ್ ವ್ಯಾಖ್ಯಾನ ಗ್ರಂಥದ ಪ್ರತಿಗಳಿಗಾಗಿ 9535122700 / 9739166405 ಈ ಮೊಬೈಲ್ ನಂಬರ್ಗಳನ್ನು ಸಂಪರ್ಕಿಸಲು ಕರ್ನಾಟಕ ಸಲಫಿ ಎಸೋಸಿಯೇಷನ್ ಮಂಗಳೂರು ಅಧ್ಯಕ್ಷರಾದ ಅಬ್ದುರಶೀದ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.