ಆಂಧ್ರದಲ್ಲಿ ಮೀನು ಸಾಗಾಟದ ಲಾರಿ ಪಲ್ಟಿ: ಹರೇಕಳದ ಯುವಕ ಮೃತ್ಯು, ಇಬ್ಬರಿಗೆ ಗಾಯ
ಮುಹಮ್ಮದ್ ರವೂಫ್
ಮಂಗಳೂರು, ಮಾ.19: ಮೀನು ಸಾಗಾಟದ ಲಾರಿಯೊಂದು ಆಂಧ್ರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಮಂಗಳೂರು ತಾಲೂಕಿನ ಹರೇಕಳದ ಗ್ರಾಮದ ಯುವಕನೋರ್ವನ ಸಹಿತ ಇಬ್ಬರು ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಹರೇಕಳ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ರವೂಫ್(22) ಮೃತಪಟ್ಟ ಯುವಕ. ಲಾರಿಯಲ್ಲಿದ್ದ ಪಾವೂರು ಹರೇಕಳ ನಿವಾಸಿ ಶಾಕಿರ್ ಎಂಬವರು ಗಂಭೀರ ಗಾಯಗೊಂಡಿದ್ದರೆ, ನಾಟೆಕಲ್ ಮೂಲದ ಇನ್ನೋರ್ವ ಯುವಕ ಕೂಡಾ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇವರು ಒಡಿಶಾ ರಾಜ್ಯದಿಂದ ಮಂಗಳೂರಿಗೆ ಲಾರಿಯಲ್ಲಿ ಮೀನು ಸಾಗಾಟ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಬುಧವಾರ ಬೆಳಗ್ಗೆ ಒಡಿಶಾ ಮೀನುಗಾರಿಕಾ ಬಂದರ್ ನಿಂದ ಲಾರಿ ತುಂಬಾ ಮೀನು ಹೇರಿಕೊಂಡು ಮಂಗಳೂರಿನತ್ತ ಪ್ರಯಾಣ ಆರಂಭಿಸಿದ್ದರು. ಆಂಧ್ರ ಮಾರ್ಗವಾಗಿ ಇವರು ಬರುತ್ತಿದ್ದ ವೇಳೆ ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಮೀನು ಸಾಗಾಟದ ಲಾರಿ ಢಿಕ್ಕಿಯಾಗಿ ಡಿವೈಡರ್ ಮಧ್ಯೆ ಉರುಳಿಬಿದ್ದಿದೆಯೆನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ರವೂಫ್ ಹಾಗೂ ಕೆಟ್ಟು ನಿಂತಿದ್ದ ಲಾರಿಯನ್ನು ರಿಪೇರಿ ಮಾಡುತ್ತಿದ್ದ ವ್ಯಕ್ತಿಯೋರ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನಿಬ್ಬರು ಗಾಯಗೊಂಡಿದ್ದರು.
ರವೂಫ್ ಮೃತದೇಹ ಇಂದು ಸಂಜೆ 5 ಗಂಟೆ ವೇಳೆ ಮನೆಗೆ ತಲುಪಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.